ಬೆಂಗಳೂರು: ‘ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಶೇ 40ರಷ್ಟು ಕಮಿಷನ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಸಮಿತಿಗೆ ದಾಖಲೆ ಸಲ್ಲಿಸಲಾಗಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದರು.
‘ಏನೇನು ದಾಖಲೆ ಇವೆಯೋ ಅವೆಲ್ಲವನ್ನೂ ಕೊಟ್ಟಿದ್ದೇನೆ. ಇನ್ನೂ ಕೆಲವು ದಾಖಲೆಗಳಿವೆ. ಅವುಗಳನ್ನೂ ಮುಂದಿನ ದಿನಗಳಲ್ಲಿ ಸಮಿತಿಗೆ ಸಲ್ಲಿಸಲಾಗುತ್ತದೆ’ ಎಂದು ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದರು.
‘ಎಲ್ಲ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿದೆ. ಈಗಿನ ಸರ್ಕಾರದಲ್ಲಿ ಅಧಿಕಾರಿಗಳ ರಾಜ್ಯಭಾರವಿದೆ. ಹಿಂದಿನ ಸರ್ಕಾರದಲ್ಲಿ ರಾಜಕಾರಣಿಗಳ ರಾಜ್ಯಭಾರವಿತ್ತು. ಈ ಸರ್ಕಾರದಲ್ಲಿ ಈವರೆಗೆ ರಾಜಕಾರಣಿ ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿಲ್ಲ’ ಎಂದು ಹೇಳಿದರು.
‘ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಮುಖ್ಯಮಂತ್ರಿಯವರಿಗೂ ಪತ್ರ ಬರೆದಿದ್ದೆ. ಅಧಿಕಾರಿಗಳದ್ದೇ ರಾಜ್ಯಭಾರವಾಗಿದೆ’ ಎಂದು ದೂರಿದರು. ಜಲಸಂಪನ್ಮೂಲ, ಲೋಕೋಪಯೋಗಿ, ಆರೋಗ್ಯ ಇಲಾಖೆ, ಬಿಬಿಎಂಪಿ ಸೇರಿ ಹಲವು ಇಲಾಖೆಗಳಲ್ಲಿನ ಭ್ರಷ್ಟಾಚಾರದ ದಾಖಲೆಗಳನ್ನು ಸಲ್ಲಿಸಲಾಗಿದೆ. ಆಡಿಯೊ, ವಿಡಿಯೊ ಜೊತೆಗೆ 6 ಸಾವಿರ ಪುಟಗಳ ದಾಖಲೆ ಸಮಿತಿಗೆ ನೀಡಲಾಗಿದೆ ಎನ್ನಲಾಗಿದೆ.