ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಮೈಸೂರು, ಮಂಡ್ಯ, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳ 13 ಸ್ಥಳಗಳಲ್ಲಿ ಶೋಧ ನಡೆಸಿದೆ.
ಮೈಸೂರಿನ ಶ್ರೀಗಂಧದ ಕೋಠಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಹಾಸನ ಕಚೇರಿಯ ಸಹಾಯಕ ಎಂಜಿನಿಯರ್ ಅಶ್ವಿನಿ ವಿ.ಎನ್. ಮತ್ತು ಲೋಕೋಪಯೋಗಿ ಇಲಾಖೆಯ ಬೆಳಗಾವಿಯ ಉಪ ವಿಭಾಗ 1ರ ಸಹಾಯಕ ಎಂಜಿನಿಯರ್ ಮನೋಜ್ ಸುರೇಶ್ ಕವಳೇಕರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಿವಶಂಕರಸ್ವಾಮಿ ಅವರ ಮೈಸೂರಿನ ಮನೆ, ಮೈಸೂರಿನಲ್ಲಿರುವ ಅವರ ಮಾವನ ಮನೆ, ಸ್ನೇಹಿತನ ಮನೆ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಾಗನೂರಿನಲ್ಲಿರುವ ತಂದೆಯ ಮನೆ ಹಾಗೂ ಕಚೇರಿಯಲ್ಲಿ ಶೋಧ ನಡೆಸಲಾಗಿದೆ.
ಅಶ್ವಿನಿ ಅವರ ಹಾಸನದ ಮನೆ, ಕಚೇರಿ ಮತ್ತು ತಂದೆಯ ಮನೆ, ಸುರೇಶ್ ಕವಳೇಕರ್ ಅವರ ಬೆಳಗಾವಿಯ ಮನೆ, ಖಾನಾಪುರ ತಾಲ್ಲೂಕಿನ ಸಂಗರಗಾಳಿ ಗ್ರಾಮದಲ್ಲಿರುವ ಸಹೋದರಿಯ ತೋಟದ ಮನೆ, ಬೆಳಗಾವಿ ನಗರದಲ್ಲಿರುವ ಇಬ್ಬರು ಸಹೋದರಿಯರ ಮನೆ ಮತ್ತು ಕಚೇರಿಯ ಮೇಲೆ ದಾಳಿಮಾಡಿದ್ದು, ಶೋಧ ನಡೆಸಲಾಗಿದೆ.