ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಶಾಸಕ ವಿನಯ್ ಕುಲಕರ್ಣಿ ನೇಮಕವಾಗಿದ್ದಾರೆ.
ಉಪಾಧ್ಯಕ್ಷರಾಗಿದ್ದ ಧಾರವಾಡದ ಶಿವಾನಂದ ಆರ್. ಅಂಬರಗಟ್ಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ವಿನಯ್ ಅವರನ್ನು ನೇಮಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಅಧಿಕಾರ ಸ್ವೀಕಾರ:
ವೀರಶೈವ ಮಹಾಸಭಾದ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ವಿನಯ್ ಕುಲಕರ್ಣಿ ಅಧಿಕಾರ ಸ್ವೀಕರಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಸಮಾಜದ ಸರ್ವಾಂಗೀಣ ಅಭ್ಯುದಯಕ್ಕಾಗಿ ಸಭಾದ ಎಲ್ಲ ಪದಾಧಿಕಾರಿಗಳೂ ಸಂಘಟಿತರಾಗಿ ಶ್ರಮಿಸಬೇಕು. ಸಮಾಜ ಪ್ರಸ್ತುತ ಕವಲು ದಾರಿಯಲ್ಲಿದೆ. ಏಕತೆ ಇದ್ದರೆ ಶಕ್ತಿ ಬರುತ್ತದೆ. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳೂ ಒಗ್ಗೂಡಲು ಇದು ಸಕಾಲ ಎಂದರು.