ಬೆಂಗಳೂರು: ಕೆಲವು ವರ್ಷಗಳಿಂದ ಅಲಯನ್ಸ್ ವಿಶ್ವವಿಶ್ವವಿದ್ಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಈ ಕಾರಣಕ್ಕೆ ವಿ.ವಿ. ಮಾಜಿ ಕುಲಪತಿ ಅಯ್ಯಪ್ಪ ದೊರೆ(52) ಕೊಲೆ ಆಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆ ನಡೆದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮತ್ತು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಕೂಡಾ ಭೇಟಿ ನೀಡಿದ್ದಾರೆ.
'ಅಯ್ಯಪ್ಪ ದೊರೆ ಅವರು ಅಲಯನ್ಸ್ ವಿಶ್ವವಿದ್ಯಾಲಯ ಮಾಜಿ ಕುಲಪತಿ. ಅವರನ್ನು ಮಂಗಳವಾರ ರಾತ್ರಿ ಅವರ ಮನೆಯಿಂದ ಕೂಗಳತೆ ದೂರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲವು ವ್ಯಾಜ್ಯಗಳಿದ್ದವು. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂಬ ಅನುಮಾನವಿದೆ. ಎರಡು ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಮಾಡಲಾಗುವುದು' ಎಂದುನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
'ಬೆಳಿಗ್ಗೆ ಆರು ಗಂಟೆಗೆ ಮಾಹಿತಿ ಬಂತು, ಮಂಗಳವಾರ ರಾತ್ರಿ ಊಟ ಮುಗಿಸಿ ಅಯ್ಯಪ್ಪ ದೊರೆ ವಾಕಿಂಗ್ ಹೋಗಿದ್ದಾರೆ. ಈ ವೇಳೆ ಯಾರೋ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅವರ ಪತ್ನಿ ಭಾವನಾ ಅವರಿಂದ ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇವೆ' ಎಂದುಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹೇಳಿದರು.
'ಬೆಳಿಗ್ಗೆ ಅವರ ಪತ್ನಿ ಹೊಯ್ಸಳಗೆ ಮಾಹಿತಿ ನೀಡಿದ್ದಾರೆ. ಅಯ್ಯಪ್ಪ ದೊರೆ ವಿಜಯಪುರ ಮೂಲದವರು. 17 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಿದ್ದರು. 7-8 ವರ್ಷ ಅಲಯನ್ಸ್ ಯೂನಿವರ್ಸಿಟಿ ಕುಲಪತಿ ಆಗಿದ್ದರು. ಕೋರ್ಟ್ನಲ್ಲಿ ಅಲಯನ್ಸ್ ವಿಶ್ವವಿದ್ಯಾಲಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ನಡೆಯುತ್ತಲ್ಲೇ ಇತ್ತು. ದುಷ್ಕರ್ಮಿಗಳ ಪತ್ತೆಗೆ ಈಗಾಗಲೇ ತನಿಖಾ ತಂಡ ರಚನೆ ಮಾಡಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ' ಎಂದು ಅವರು ಮಾಹಿತಿ ನೀಡಿದರು.