ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಹಳೇ ತರ್ಲಘಟ್ಟ ಸಮೀಪದ ‘ನವಿಲಗದ್ದೆ’ ಗುಡ್ಡದ ತಮ್ಮ ಜಮೀನಿನಲ್ಲಿ ‘ಆಸ್ಟ್ರೋ ಫಾರ್ಮ್’ ಖಗೋಳ ಪ್ರವಾಸೋದ್ಯಮ ಕೇಂದ್ರ ಸ್ಥಾಪಿಸಿರುವ ಕುನ್ನೂರು ಗ್ರಾಮದ ನಿರಂಜನ ಖಾನಗೌಡ್ರ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರಿಂದ ನೆರವಿನ ಭರವಸೆ ಸಿಕ್ಕಿದೆ.
‘ಪ್ರಜಾವಾಣಿ’ ಮುಖಪುಟದಲ್ಲಿ ಜುಲೈ 12ರಂದು ಪ್ರಕಟಗೊಂಡ ‘ನವಿಲಗದ್ದೆಯಲ್ಲಿ ಧರೆಗಿಳಿವ ತಾರೆಗಳ ತೋಟ’ ಶೀರ್ಷಿಕೆಯ ವಿಶೇಷ ವರದಿಗೆ ಸಚಿವರು ಸ್ಪಂದಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ, ‘ಖಗೋಳ ಪ್ರವಾಸೋದ್ಯಮ ಕೇಂದ್ರ ತೆರೆದಿರುವುದು ಸಂತಸದ ಸಂಗತಿಯಾಗಿದ್ದು, ನಿಮ್ಮ ಈ ಐತಿಹಾಸಿಕ ಸಾಧನೆ ಇತರರಿಗೂ ಮಾದರಿಯಾಗಲಿ ಹಾಗೂ ಭವಿಷ್ಯದಲ್ಲಿ ನೀವು ಮತ್ತಷ್ಟು ಸಾಧನೆ ಮಾಡಿ. ನಿಮ್ಮಂತಹ ಸಾಮಾಜಿಕ ಕಳಕಳಿ ಇರುವ ಯುವಕರಿಗೆ ಮತ್ತು ನಿಮ್ಮ ಮುಂದಿನ ಆವಿಷ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ’ ಎಂದು ತಿಳಿಸಿದ್ದಾರೆ.