ಪುತ್ತೂರು: ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆ ಸರಬರಾಜು ಆಗಿದ್ದು, ಭಕ್ತಕೋಡಿ ಅಂಗನವಾಡಿ ಕೇಂದ್ರದವರು ಇದನ್ನು ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಮನಕ್ಕೆ ತಂದಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಜೂನ್ ತಿಂಗಳಲ್ಲಿ 160 ಮೊಟ್ಟೆ ಸರಬರಾಜಾಗಿತ್ತು. ಮೊಟ್ಟೆ ಪೂರೈಕೆಯ ಗುತ್ತಿಗೆ ಪಡೆದಿರುವ ವಿಜಯಪುರದ ‘ಗುತ್ತಿ ಬಸವೇಶ್ವರ’ ಕಂಪನಿಯವರು ಮೊಟ್ಟೆ ಸರಬರಾಜು ಮಾಡಿದ್ದರು. ಜುಲೈ ತಿಂಗಳಲ್ಲಿ ಸರಬರಾಜು ಮಾಡಲಾದ ಮೊಟ್ಟೆಗಳ ಪೈಕಿ ಕೆಲವು ಕೊಳೆತು ಹೋಗಿವೆ ಎಂದು ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
‘ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆ ಟೆಂಡರ್ ಪ್ರಕ್ರಿಯೆ ಜಿಲ್ಲಾ ಮಟ್ಟದಲ್ಲಿ ನಡೆದಿದೆ. ಅವಿಭಜಿತ ಪುತ್ತೂರು ತಾಲ್ಲೂಕಿನ 375 ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾದ ಮೊಟ್ಟೆಗಳ ಪೈಕಿ ಕೆಲವು ಅಂಗನವಾಡಿ ಕೇಂದ್ರ ಗಳಲ್ಲಿ ಮಾತ್ರ ಕೊಳೆತ ಮೊಟ್ಟೆ ಕಂಡು ಬಂದಿವೆ. ಮೊಟ್ಟೆ ಪೂರೈಕೆಯ ಟೆಂಡರ್ ಪಡೆದುಕೊಂಡ ಕಂಪನಿಯವರು ಕೊಳೆತ ಮೊಟ್ಟೆಗಳನ್ನು ವಾಪಸ್ ಪಡೆದು ಬದಲಿ ಮೊಟ್ಟೆ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ತಿಳಿಸಿದ್ದಾರೆ.