ಮಂಗಳೂರು: ‘ಬಿಜೆಪಿಯವರು ನಮ್ಮ ಕಾರ್ಯಕ್ರಮಗಳನ್ನಷ್ಟೇ ಅಲ್ಲ, ನಾವು ಬಳಸಿದ ‘ಗ್ಯಾರಂಟಿ’ ಪದವನ್ನೂ ಕದ್ದು ‘ಮೋದಿ ಗ್ಯಾರಂಟಿ’ ಎಂದು ಪ್ರಚಾರ ಮಾಡಲಾರಂಭಿಸಿದ್ದಾರೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಇದನ್ನೆಲ್ಲ ಮೋದಿಯವರೇ ಮಾಡಿದ್ದು ಹೇಳುವಂತಹ ನೀಚ ಮನಸ್ಥಿತಿ ಹೊಂದಿದ್ದಾರೆ. ಉತ್ತಮ ಆಡಳಿತ ನೀಡಿಯೂ 2018ರಲ್ಲಿ ನಾವು ಸೋತಿದ್ದು ಪ್ರಚಾರಕ್ಕೆ ಮಹತ್ವ ನೀಡದ ಕಾರಣಕ್ಕೆ. ನಮ್ಮ ಕಾರ್ಯಕರ್ತರು ಎಚ್ಚರವಾಗಿರಬೇಕು. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಬಿಜೆಪಿಯ 25 ಸಂಸದರು ಯಾವತ್ತಾದರೂ ಪ್ರಶ್ನೆ ಮಾಡಿದ್ದಾರೆಯೇ. ಮಿಸ್ಟರ್ ನಳಿನ್ ಕುಮಾರ್ ಕಟೀಲ್, ತಾಯಿ ಸಚಿವೆ ಶೋಭಾ ಕರಂದ್ಲಾಜೆ ಯಾವತ್ತಾದರೂ ಬಾಯಿ ಬಿಟ್ಟಿದ್ದೀರಾ? ನಿಮ್ಮನ್ನು ಮತ್ತೆ ಗೆಲ್ಲಿಸಬೇಕಾ’ ಎಂದು ಅವರು ಪ್ರಶ್ನಿಸಿದರು.
‘ಮೋದಿಯವರು ವಿಧಾನ ಸಭಾ ಚುನಾವಣೆಯಲ್ಲಿ, ರಸ್ತೆ ರಸ್ತೆಯಲ್ಲಿ ತಿರುಗಿದರೂ ಜನ ನಮಗೆ 136 ಸ್ಥಾನಗಳನ್ನು ಕೊಟ್ಟಿದ್ದಾರೆ. ಈ ಸಲವೂ ನಾವು ರಾಜ್ಯದಲ್ಲಿ ಕನಿಷ್ಟ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಇಲ್ಲಿನ ಎರಡು ಸ್ಥಾನ ಗೆಲ್ಲಿಸಿಕೊಡಿ’ ಎಂದು ಮನವಿ ಮಾಡಿದರು.