ಬೆಂಗಳೂರು: ಸಿದ್ಧಾಪುರ ಠಾಣೆ ವ್ಯಾಪ್ತಿಯ ಬಾಲಮಂದಿರದಲ್ಲಿದ್ದ ಬಾಲಕನೊಬ್ಬ, ಕಟ್ಟಡದ ಸುತ್ತಲೂ ಅಳವಡಿಸಿರುವ ಮಳೆ ನೀರು ಸಂಗ್ರಹದ ಪೈಪ್ ನೆರವಿನಿಂದ ಪರಾರಿಯಾಗಿದ್ದಾನೆ.
ಕಳೆದ ವಾರ ನಡೆದಿರುವ ಘಟನೆ ಸಂಬಂಧ ಬಾಲಮಂದಿರದ ಅಧಿಕಾರಿಗಳು ಸಿದ್ಧಾಪುರ ಠಾಣೆಗೆ ದೂರು ನೀಡಿದ್ದಾರೆ.
‘ಬೆಳಿಗ್ಗೆ 5 ಗಂಟೆಗೆ ಎದ್ದಿದ್ದ ಬಾಲಕ ತನ್ನ ಕೊಠಡಿಯಿಂದ ಹೊರಗೆ ಬಂದಿದ್ದಾನೆ. ಆತನನ್ನು ಪ್ರಶ್ನಿಸಿದ್ದ ಸಿಬ್ಬಂದಿಗೆ, ‘ಮೂತ್ರ ವಿಸರ್ಜನೆಗೆ ಹೋಗುತ್ತಿದ್ದೇನೆ’ ಎಂಬುದಾಗಿ ಸುಳ್ಳು ಹೇಳಿದ್ದ. ಅದಾಗಿ ಕೆಲವೇ ನಿಮಿಷಗಳಲ್ಲಿ ಆತ ಪೈಪ್ ಏರಿ ಕಟ್ಟಡದಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ರೈಲು ಹಾಗೂ ಬಸ್ ನಿಲ್ದಾಣ ಎಲ್ಲ ಕಡೆ ಹುಡುಕಾಡಿದರೂ ಬಾಲಕನ ಸುಳಿವು ಸಿಕ್ಕಿಲ್ಲ. ಪೋಷಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತಿದೆ’ ಎಂದು ತಿಳಿಸಿದರು.