ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಜಲನೀತಿ - 2022ಕ್ಕೆ ಸಚಿವ ಸಂಪುಟ ಒಪ್ಪಿಗೆ

ಕೃಷಿಯಲ್ಲಿ ನೀರಿನ ಮಿತ ಬಳಕೆ * ಪ್ರವಾಹದ ಸಂದರ್ಭದಲ್ಲಿ ನೀರು ಸಂಗ್ರಹದ ಚಿಂತನೆ
Last Updated 12 ಆಗಸ್ಟ್ 2022, 11:13 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿಯಲ್ಲಿ ಮಿತವಾದ ನೀರಿನ ಬಳಕೆ, ಪ್ರವಾಹದ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ವರ್ಷಕ್ಕೆ 1,608 ಘ.ಮೀ.ಗಳಷ್ಟು ನೀರನ್ನು ಒದಗಿಸುವ ಮಹತ್ವದ ಅಂಶಗಳನ್ನು ಒಳಗೊಂಡ ರಾಜ್ಯ ಜಲನೀತಿ 2022 ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಜಲನೀತಿಯ ಪ್ರಮುಖ ಅಂಶಗಳು:

* ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ನೀರಾವರಿ ಸಾಮರ್ಥ್ಯ ಸೃಷ್ಟಿ ಮತ್ತು ಅವುಗಳ ಬಳಕೆಗಳ ನಡುವೆ ಇರುವ ಅಂತರವನ್ನು ನಿವಾರಿಸುವುದು. ಸಾಧ್ಯವಿರುವ ಕಡೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ನೀರಾವರಿ ವ್ಯವಸ್ಥೆಯಲ್ಲಿ ಕಾಲುವೆ ಯಾಂತ್ರೀಕರಣದ ಬಳಕೆ ಕಡ್ಡಾಯಗೊಳಿಸಿ, ತೂಬುಗಳಲ್ಲಿ ನಿಗದಿತ ಹರಿಯುವಿಕೆ ದೃಢೀಕರಿಸಬೇಕಾಗಿದೆ. ಎಲ್ಲ ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ನಿರ್ವಹಣೆಯ ಸಹಭಾಗಿತ್ವ ಜಾರಿಗೆ ತರಬೇಕು.

*ಅಂತರ್ಜಲ ಮಟ್ಟ ಕುಸಿಯುವಿಕೆ ಮತ್ತು ಹೆಚ್ಚುತ್ತಿರುವ ಅಂತರ್ಜಲ ಮಲಿನತೆಯು ಕಳವಳಕಾರಿಯಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸಲು ಪಂಚಾಯಿತಿ ಮಟ್ಟದ ಅಂತರ್ಜಲ ಬಜೆಟ್‌ ಮತ್ತು ಸಮಗ್ರ ಅಂತರ್ಜಲ–ಕೆರೆ– ಜಲಾನಯನ ನಿರ್ವಹಣೆಯ ಸಹಭಾಗಿತ್ವ ಅಳವಡಿಸಿಕೊಳ್ಳಬೇಕು.

*ಕೈಗಾರಿಕೆಗಳಿಗೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಕೆಗಾಗಿ ಮೀಟರಿಂಗ್ ಆಧರಿಸಿ ನೀರಿನ ದರ ವಿಧಿಸಬೇಕು. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಹೊರಗಿನ ಮತ್ತು ಸ್ಥಳೀಯ ನೀರು, ಮೇಲ್ಮೈ ಮತ್ತು ಅಂತರ್ಜಲ, ಮೇಲ್ಛಾವಣಿ ಹಾಗೂ ತ್ಯಾಜ್ಯ ನೀರಿನ ನಿರ್ವಹಣೆಯತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ.

*ನೀರಿನ ಸಮರ್ಥ ನಿರ್ವಹಣೆಗೆ ಜಲ ಮಾಹಿತಿ, ಅದರ ವಿಶ್ಲೇಷಣೆ ಮತ್ತು ಬೆಂಬಲಿತ ನಿರ್ಧರಣಾ ವ್ಯವಸ್ಥೆ ಜಾರಿಗೊಳಿಸಬೇಕು.

* ಒಟ್ಟು ಜನಸಂಖ್ಯೆಗೆ ನೀರನ್ನು ಒದಗಿಸುವ ಭರವಸೆಯನ್ನು ಖಾತರಿಗೊಳಿಸಬೇಕು. ನಗರ ಮತ್ತು ಗ್ರಾಮೀಣ ನೀರು ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಬೇಕು. ಜಲಾನಯನ ಪ್ರದೇಶಗಳು ಮತ್ತು ಜಲಮೂಲಗಳ ಆರೋಗ್ಯ ಸುಧಾರಣೆ, ಸುಸ್ಥಿರ ಅಂತರ್ಜಲ ನಿರ್ವಹಣೆ, ನೀರಿನ ನಿಯಂತ್ರಣ ಸುಧಾರಣೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು.

* ಭಾರಿ ಮಳೆಯ ಅವಧಿಯಲ್ಲಿ ಸಮಯೋಚಿತ ಮೇಲ್ವಿಚಾರಣೆ ಮತ್ತು ಮುನ್ಸೂಚನೆ ತಂತ್ರಜ್ಞಾನಗಳಿಂದ ಪ್ರವಾಹ ನಿಯಂತ್ರಣ ಒದಗಿಸುವುದರೊಂದಿಗೆ ಮತ್ತು ಅಣೆಕಟ್ಟು ವ್ಯವಸ್ಥಾಪಕರು ಮತ್ತು ಪ್ರವಾಹ ನಿಯಂತ್ರಣ ಆಡಳಿತದ ನಡುವೆ ಪರಿಣಾಮಕಾರಿ ಸಂವಹನದ ಮೂಲಕ ಪ್ರವಾಹ ಅಪಾಯಗಳನ್ನು ನಿಯಂತ್ರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT