ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿ ಆ ಜಿಲ್ಲೆಯಲ್ಲಿ ಮೇ 3ರಂದು ಆಮ್ಲಜನಕದ ಕೊರತೆಯಿಂದ 24 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಆರೋಪದ ಕುರಿತು ಹೈಕೋರ್ಟ್ ನಿಗಾವಣೆಯಲ್ಲಿ ತನಿಖೆ ನಡೆಸುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ಮತ್ತಷ್ಟು ಮಂದಿ ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಅಧಿಕಾರಿಗಳೂ ವ್ಯಕ್ತಪಡಿಸಿದ್ದಾರೆ.
ಗೊಂದಲಕ್ಕೆ ಆಸ್ಪದ ನೀಡಬಾರದು: ಎಸ್.ಆರ್. ನಾಯಕ್
ಹೈಕೋರ್ಟ್ ಸಾಂವಿಧಾನಿಕ ಸಂಸ್ಥೆ. ಇಂತಹ ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್ಗೆ ಅಧಿಕಾರವಿದೆ. ಚಾಮರಾಜನಗರ ಪ್ರಕರಣದಲ್ಲಿ ಹೈಕೋರ್ಟ್ ವಿಚಾರಣೆ ಆರಂಭಿಸಿ, ತನಿಖೆಗೆ ಸಮಿತಿಯೊಂದನ್ನು ನೇಮಿಸುವ ಇಂಗಿತ ವ್ಯಕ್ತಪಡಿಸಿತ್ತು. ಅದೇ ಸಮಯದಲ್ಲಿ ಸರ್ಕಾರ ಪ್ರತ್ಯೇಕ ನ್ಯಾಯಾಂಗ ತನಿಖೆಗೆ ಆಯೋಗ ನೇಮಿಸಿದೆ. ಸರ್ಕಾರದ ಆಯೋಗ ನೇಮಿಸಿದ್ದರೂ, ಹೈಕೋರ್ಟ್ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ವಿಶೇಷ ಸಮಿತಿ ನೇಮಿಸಿದೆ. ಇಂತಹ ಸಂದರ್ಭದಲ್ಲಿ ಹೈಕೋರ್ಟ್ ಆದೇಶದಂತೆಯೇ ಮುಂದುವರಿಯಬೇಕು.
ಹೈಕೋರ್ಟ್ ಸಮಿತಿಯಲ್ಲಿರುವ ಎ.ಎನ್.ವೇಣುಗೋಪಾಲ ಗೌಡ ಮತ್ತು ಕೆ.ಎನ್. ಕೇಶವ ನಾರಾಯಣ ಹಾಗೂ ಸರ್ಕಾರ ನೇಮಿಸಿರುವ ಆಯೋಗದ ಮುಖ್ಯಸ್ಥರಾಗಿರುವ ಬಿ.ಎ. ಪಾಟೀಲ್ ಮೂವರೂ ಉತ್ತಮ, ಅರ್ಹ ವ್ಯಕ್ತಿಗಳೇ. ಆದರೆ, ಸರ್ಕಾರದ ನಿರ್ಧಾರದಿಂದ ಗೊಂದಲ ಸೃಷ್ಟಿಯಾಗಬಾರದು. ಸಾರ್ವಜನಿಕರಿಗೂ ಹೈಕೋರ್ಟ್ ಉಸ್ತುವಾರಿಯ ತನಿಖೆಯಲ್ಲೇ ಹೆಚ್ಚು ವಿಶ್ವಾಸ ಇರುತ್ತದೆ. ಆದ್ದರಿಂದ ಆ ತೀರ್ಮಾನವನ್ನು ಎಲ್ಲರೂ ಒಪ್ಪಬೇಕಿದೆ.
-ಎಸ್.ಆರ್. ನಾಯಕ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ
**
ಸರ್ಕಾರದ ತೀರ್ಮಾನ ಅಸಮಂಜಸ, ಅನೂರ್ಜಿತ: ವಿ. ಗೋಪಾಲ ಗೌಡ
24 ಮಂದಿ ಕೋವಿಡ್ ರೋಗಿಗಳ ಸಾವಿಗೆ ಸಂರ್ಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ವಿಭಾಗೀಯ ಪೀಠ, ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ನೇಮಿಸುವ ಕುರಿತು ಅಡ್ವೊಕೇಟ್ ಜನರಲ್ ಅವರಿಂದ ಸಲಹೆ ಕೇಳಿತ್ತು. ಮರು ದಿನ ಅವರು ಈ ಕುರಿತು ವಾದ ಮಂಡಿಸಬೇಕಿತ್ತು. ಆದರೆ, ಸರ್ಕಾರ ತಾನೇ ಆಯೋಗವೊಂದನ್ನು ನೇಮಿಸಿದೆ. ಹೈಕೋರ್ಟ್ನಲ್ಲಿ ಪ್ರಕರಣ ವಿಚಾರಣೆಯಲ್ಲಿ ಇರುವಾಗ ಸಂಪುಟವೂ ಸೇರಿದಂತೆ ಸರ್ಕಾರದಲ್ಲಿನ ಯಾರಿಗೂ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ.
ಹೈಕೋರ್ಟ್ನ ಆದೇಶದ ಎದುರಿನಲ್ಲಿ ಸರ್ಕಾರದ ಆದೇಶ ಊರ್ಜಿತವಾಗುವುದಿಲ್ಲ. ಸರ್ಕಾರ ತನ್ನ ವ್ಯಾಪ್ತಿಯನ್ನು ಮೀರಿ ಅಸಮಂಜಸವಾದ ಆದೇಶ ಹೊರಡಿಸಿದೆ. ಪ್ರಕರಣವೊಂದು ಹೈಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಈಗ ಹೈಕೋರ್ಟ್ ನೇಮಿಸಿರುವ ಸಮಿತಿಯೇ ತನಿಖೆ ನಡೆಸಲು ಪೂರಕವಾದ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.
-ವಿ. ಗೋಪಾಲ ಗೌಡ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
**
ಸರ್ಕಾರ ಆದೇಶ ವಾಪಸ್ ಪಡೆಯಲಿ: ಎಚ್.ಎನ್. ನಾಗಮೋಹನ್ ದಾಸ್
ಈ ಪ್ರಕರಣದಲ್ಲಿ ರಾಜ್ಯದ ಜನರ ಬೇಡಿಕೆಗೆ ಧ್ವನಿಯಾಗಿ ಹೈಕೋರ್ಟ್ ಕೆಲಸ ಮಾಡಿದೆ. ಅಲ್ಲಿಯವೆರಗೂ ಸುಮ್ಮನೆ ಇದ್ದ ರಾಜ್ಯ ಸರ್ಕಾರ, ಹೈಕೋರ್ಟ್ ವಿಚಾರಣೆ ಆರಂಭಿಸುತ್ತಿದ್ದಂತೆ ಆಯೋಗವೊಂದನ್ನು ನೇಮಕ ಮಾಡಿದೆ. ವಿಶಾಲ ವ್ಯಾಪ್ತಿಯಲ್ಲಿ ಈ ಪ್ರಕರಣವನ್ನು ವಿಶ್ಲೇಷಣೆಗೆ ಒಳಪಡಿಸಿ, ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ತನಿಖೆ ನಡೆಸುವ ನಿರ್ಧಾರವನ್ನು ಹೈಕೋರ್ಟ್ ಕೈಗೊಂಡಿದೆ. ಹೈಕೋರ್ಟ್ ಮಧ್ಯ ಪ್ರವೇಶ ಮಾಡುವುದಕ್ಕೂ ಮೊದಲು ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರೆ ಇಂತಹ ಸ್ಥಿತಿ ಉದ್ಭವಿಸುತ್ತಿರಲಿಲ್ಲ.
ಸರ್ಕಾರ ನ್ಯಾಯಾಂಗ ತನಿಖೆಗೆ ಆಯೋಗ ನೇಮಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಹೈಕೋರ್ಟ್ ಜತೆಗೂಡಿ ಹೊಸದಾಗಿ ಆಯೋಗವೊಂದನ್ನು ರಚಿಸುವ ಮುಕ್ತ ಅವಕಾಶವೂ ಸರ್ಕಾರಕ್ಕೆ ಇದೆ. ಹೈಕೋರ್ಟ್ ಉಸ್ತುವಾರಿಯಲ್ಲೇ ತನಿಖೆ ನಡೆಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವುದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಹೆಜ್ಜೆ ಇಡಬೇಕಿದೆ.
-ಎಚ್.ಎನ್. ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.