ಚಿಕ್ಕಮಗಳೂರು: ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವಿರೋಧಿಸಿ ಕೆಲವರು ಪೆಟ್ರೋಲ್ ಬಾಂಬ್ ಹಾಕಲು, ಟೈರ್ಗೆ ಬೆಂಕಿ ಹಚ್ಚಲು ಸಜ್ಜಾಗಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎರಡನೇ ದಿನದ ಸಮ್ಮೇಳನ ಮುಂದೂಡಬೇಕು’ ಎಂದು ಪೊಲೀಸರು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಮೊದಲ ದಿನ (ಇದೇ 10ರಂದು) ಈ ನೋಟಿಸ್ ನೀಡಲಾಗಿದೆ.
‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಕಾರ್ಯಕ್ರಮವನ್ನು ನಿಲ್ಲಿಸಿ ಎಂದು ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿದ್ದೀರಿ. ಅದನ್ನು ಬಳಸುವುದಕ್ಕೆ ಅನುಮತಿ ಪಡೆದಿಲ್ಲ. ಮೂರ್ನಾಲ್ಕು ಗುಂಪುಗಳು ಪ್ರತಿಭಟನೆ ಮಾಡಿ ಸಮ್ಮೇಳನ ಸ್ಥಳಕ್ಕೆ ನುಗ್ಗಲು ಯತ್ನಿಸಿದವು. 90 ಮಂದಿಯನ್ನು ವಶಕ್ಕೆ ಪಡೆದಿದ್ದೆವು. ಸಮ್ಮೇಳನ ಮುಂದುವರಿಸಿದರೆ ಶೃಂಗೇರಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆ ಇದೆ. ಆದ್ದರಿಂದ ಎರಡನೇ ದಿನ ಕಾರ್ಯಕ್ರಮ ನಡೆಸಬಾರದೆಂದು’ ಎಂದು ಶೃಂಗೇರಿ ಪೊಲೀಸ್ ಇನ್ಸ್ಪೆಕ್ಟರ್ ನೋಟಿಸ್ನಲ್ಲಿ ತಿಳಿಸಿದ್ದಾರೆ.
‘ಶೃಂಗೇರಿಯಲ್ಲಿ 10ರಂದು ನಡೆದಿರುವ ಎಲ್ಲ ಘಟನೆಗಳ ಬಗ್ಗೆ ಪರಿಶೀಲಿಸಿ, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ಪತ್ರಿಕಾ ಹೇಳಿಕೆಯಲ್ಲಿ ಶನಿವಾರ ತಿಳಿಸಿದ್ದಾರೆ.