ಬೆಂಗಳೂರು: ಕಾಂಗ್ರೆಸ್ನವರು ಕೆಲವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಅವರ ತಂತ್ರ ವಿಫಲ ಆಗುತ್ತದೆ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದರು.
ರಾಜಕೀಯದಲ್ಲಿ ಪರಸ್ಪರ ಪರಿಚಯ ಇರುತ್ತದೆ. ಸ್ನೇಹವೂ ಇರುತ್ತದೆ. ವಿಪಕ್ಷದವರು ಮುಖ್ಯಮಂತ್ರಿ, ಡಿಸಿಎಂ ಭೇಟಿ ಮಾಡಬೇಕಾಗುತ್ತದೆ. ಇಂತಹ ಭೇಟಿಗಳಿಗೆಲ್ಲ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
‘ಒಂದು ದೇಶ ಒಂದು ಚುನಾವಣೆ ಅನ್ನೋದು ಜನರ ಅಪೇಕ್ಷೆ. ಇದಕ್ಕೆ ‘ಇಂಡಿಯಾ’ ಒಕ್ಕೂಟದ ವಿರೋಧ ಸರಿಯಲ್ಲ. ಅವರು ತಮ್ಮ ಅಭಿಪ್ರಾಯವನ್ನು ಸಲ್ಲಿಸಲಿ. ನಾಳೆಯೇ ಒಂದು ದೇಶ ಒಂದು ಚುನಾವಣೆ ಜಾರಿ ಆಗಲ್ಲ. ಸಾಕಷ್ಟು ಪ್ರಕ್ರಿಯೆಗಳು ಇರುತ್ತವೆ. ಎಲ್ಲದಕ್ಕೂ ವಿರೋಧ ಮತ್ತು ರಾಜಕಾರಣ ಮಾಡುವುದೂ ಸರಿಯಲ್ಲ’ ಎಂದು ಅವರು ಹೇಳಿದರು.