ಬೆಂಗಳೂರು: ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗೋಧ್ರಾ ಮಾದರಿ ದುರ್ಘಟನೆಗೆ ಸಂಚು ನಡೆಯುತ್ತಿದೆ ಎಂಬ ಹೇಳಿಕೆ ಕುರಿತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ವಿಚಾರಣೆಗೆ ಸಿಸಿಬಿ ಪೊಲೀಸರು ಶುಕ್ರವಾರ ಬೆಳಿಗ್ಗೆ ಯತ್ನಿಸಿದರು.
ಕುಮಾರಕೃಪಾ ಅತಿಥಿಗೃಹದಲ್ಲಿದ್ದ ಹರಿಪ್ರಸಾದ್ ಅವರನ್ನು ಭೇಟಿಮಾಡಿದ ಸಿಸಿಬಿ ಎಸಿಪಿ ಮತ್ತು ಇತರ ಅಧಿಕಾರಿಗಳು, ಹಿಂದಿನ ಹೇಳಿಕೆ ಕುರಿತು ವಿವರಣೆ ದಾಖಲಿಸಿಕೊಳ್ಳಲು ಬಂದಿರುವುದಾಗಿ ತಿಳಿಸಿದರು. ವಿವರವಾದ ಹೇಳಿಕೆ ನೀಡುವಂತೆ ಕೋರಿದರು.
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹರಿಪ್ರಸಾದ್, 'ರಾಜ್ಯದ ಜನರ ಸುರಕ್ಷತೆ ದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ಈಗ ನನಗೆ ವಿವಿಐಪಿ ಆತಿಥ್ಯ ಬೇಕಿಲ್ಲ. ಪ್ರಕರಣ ದಾಖಲಿಸಿ, ವಾರೆಂಟ್ ತಂದು ಠಾಣೆಗೆ ಕರೆದೊಯ್ಯಿರಿ. ಅಲ್ಲಿಯೇ ವಿವರಣೆ ನೀಡುತ್ತೇನೆ' ಎಂದರು.
ಪೊಲೀಸರ ಕ್ರಮದ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, 'ವಿವರಣೆ ನೀಡಲು ಸಿದ್ದನಿದ್ದೇನೆ. ಮಂಪರು ಪರೀಕ್ಷೆಯನ್ನೂ ಮಾಡಲಿ. ನನಗೆ ಮಾತ್ರವಲ್ಲ ಬಿಜೆಪಿ ಅಧ್ಯಕ್ಷರನ್ನೂ ಕರೆಯಲಿ' ಎಂದರು.