ಬೆಂಗಳೂರು:‘ನಿವೇಶನವೊಂದನ್ನು ಖರೀದಿಸುವ ವಿಚಾರದಲ್ಲಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ನಟ ಮಯೂರ್ ಪಟೇಲ್ ಅವರು ಎಚ್ಎಸ್ಆರ್ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಟ ನೀಡಿರುವ ದೂರಿನ ಮೇರೆಗೆಅನಂತರಾಮ್ ರೆಡ್ಡಿ ಹಾಗೂ ಮಂಜುನಾಥ್ ರೆಡ್ಡಿ ಎಂಬುವವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬೇಗೂರಿನ ಪರಂಗಿಪಾಳ್ಯದ ಬಳಿ ಇರುವ ನಿವೇಶನವೊಂದನ್ನುಸುಬ್ರಹ್ಮಣ್ಯ ಎಂಬುವವರಿಂದ ಖರೀದಿಸಲು ಮಯೂರ್ ಕರಾರು ಮಾಡಿಕೊಂಡಿದ್ದರು. ಬಳಿಕ ಜ.22ರಂದು ತನ್ನ ಸ್ನೇಹಿತನ ಜೊತೆಗೆ ನಿವೇಶನ ನೋಡಲು ತೆರಳಿದ್ದರು. ಆದರೆ, ನಿವೇಶನಕ್ಕೆ ಬೇರೊಬ್ಬರು ಕಾಂಪೌಂಡ್ ನಿರ್ಮಿಸಿದ್ದರು.
‘ಈ ಬಗ್ಗೆ ವಿಚಾರಿಸಲು ಮುಂದಾದಾಗ, ಸ್ಥಳಕ್ಕೆ ಬಂದ ನಾಲ್ವರು ಅಪರಿಚಿತರು, ಈ ನಿವೇಶನ ಏಕೆ ನೋಡುತ್ತಿದ್ದೀರಾ? ಇದು, ಗನ್ ಮಂಜಣ್ಣ ಹಾಗೂ ಅನಂತರಾಮ ರೆಡ್ಡಿಗೆ ಸೇರಿದ್ದು. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು’.
‘ಬಳಿಕಅನಂತರಾಮ ರೆಡ್ಡಿ ಅವರನ್ನು ಭೇಟಿಯಾಗಿ ನಿವೇಶನದ ಬಗ್ಗೆ ಮಯೂರ್ ವಿಚಾರಿಸಿದ್ದು, ಈ ನಿವೇಶನವನ್ನು ತನ್ನ ಮಗನಾದ ಮಂಜುನಾಥ್ ರೆಡ್ಡಿಗೆ ದಾನ ಪತ್ರ ಮಾಡಿಕೊಟ್ಟಿದ್ದೇನೆ. ಯಾರನ್ನೂ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಅನಂತರಾಮ್ ಮಾತನಾಡಿದ್ದರು. ನೀನು ಆ ಜಾಗಕ್ಕೆ ಬಾ, ಆಮೇಲೆ ನಾವು ಯಾರು ಎನ್ನುವುದು ನಿನಗೆ ತಿಳಿಯುತ್ತದೆ ಎಂದು ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಮಯೂರ್ ತಿಳಿಸಿದ್ದಾರೆ.