ಬೆಂಗಳೂರು: ‘ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿ ಇದ್ದರೆ ಅರ್ಜಿದಾರರ ಪಾಸ್ಪೋರ್ಟ್ ನವೀಕರಣಕ್ಕೆ ಅವಕಾಶ ನೀಡಲಾಗದು‘ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಸಂತೋಷ್ ಬೀಜಾಡಿ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ನವೀಕರಣಕ್ಕೆ ನಿರಾಕರಿಸಿ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ 2023ರ ಸೆಪ್ಟೆಂಬರ್ 20ರಂದು ನೀಡಿದ್ದ ಹಿಂಬರಹವನ್ನು ಎತ್ತಿಹಿಡಿದಿದೆ.
‘ಪಾಸ್ಪೋರ್ಟ್ ಕಾಯ್ದೆ–1967ರ ನಿಯಮಗಳಲ್ಲಿ, ಪಾಸ್ಪೋರ್ಟ್ ವಿತರಣೆ ಅಥವಾ ನವೀಕರಣಕ್ಕೆ ಬಾಕಿ ಇರುವ ಕ್ರಿಮಿನಲ್ ಪ್ರಕರಣವನ್ನು ಅಲಕ್ಷಿಸಲು ಪ್ರತ್ಯೇಕ ಮಾನದಂಡವಿಲ್ಲ‘ ಎಂದು ನ್ಯಾಯಪೀಠ ಹೇಳಿದೆ.
‘ಅರ್ಜಿದಾರರು ತಮ್ಮ ವಿರುದ್ಧ ಎಲ್ಲಿ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿ ಇದೆಯೋ ಅದೇ ಕೋರ್ಟ್ನಲ್ಲಿ ಅಲ್ಪಾವಧಿಗೆ ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಬಹುದು. ಕೋರ್ಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅರ್ಜಿಯನ್ನು ಪರಿಗಣಿಸಬಹುದು‘ ಎಂದು ವಿವರಿಸಿದೆ.
ಈ ಹಿಂದೆ ಇದೇ ಹೈಕೋರ್ಟ್ನ ಮೂರು ಪ್ರತ್ಯೇಕ ಏಕಸದಸ್ಯ ನ್ಯಾಯಪೀಠಗಳು, ‘ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿ ಇದ್ದಾಗ ಪಾಸ್ಪೋರ್ಟ್ ನವೀಕರಿಸಲು ಅಡ್ಡಿಯಿಲ್ಲ‘ ಎಂದು ಆದೇಶಿಸಿದ್ದವು.