ಬೆಂಗಳೂರು: ಮಧ್ಯಸ್ತಿಕೆ ಪ್ರಕರಣಗಳಿಗೆ ಮಾರ್ಗದರ್ಶಿ ಸೂತ್ರ ಸಿದ್ಧಗೊಳಿಸಲಾಗುತ್ತಿದ್ದು, 15 ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ವಿಧಾನಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೈಕೋರ್ಟ್ನ ಸರ್ಕಾರಿ ವಕೀಲರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಮಧ್ಯಸ್ತಿಕೆ ಪ್ರಕರಣಗಳಲ್ಲಿದ್ದ ಲೋಪಗಳನ್ನು ಸರಿಪಡಿಸಲು ಹಾಗೂ ಸರ್ಕಾರಿ ವಕೀಲರು ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಿಯಮ ರೂಪಿಸಲಾಗುತ್ತಿದೆ. ಉನ್ನತಾಧಿಕಾರಿಗಳ ಜತೆ ಚರ್ಚಿಸಿದ ನಂತರ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗುವುದು ಎಂದರು.
ಯಾವುದೇ ದಿಕ್ಸೂಚಿ ಇಲ್ಲದೇ, ಸರ್ಕಾರದ ಆದೇಶ, ಸುತ್ತೋಲೆಗಳ ಮೇಲೆ ನಡೆಯುತ್ತಿದ್ದ ಸರ್ಕಾರಿ ವ್ಯಾಜ್ಯ ನಿರ್ವಹಣೆಗೆ ಚೌಕಟ್ಟು ಒದಗಿಸಲಾಗಿದೆ. ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಕಾಯ್ದೆ ಜಾರಿಗೆ ತರಲಾಗಿದೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ವಕೀಲರ ಕಾರ್ಯನಿರ್ವಹಣೆಗೆ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಇನ್ನು ಮುಂದೆ ಸರ್ಕಾರದ ವಕೀಲರು ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ, ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿ ನಿರ್ವಹಿಸಲಿದ್ದಾರೆ ಎಂದರು.
ಐದಾರು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಶೇ 75ರಷ್ಟು ಪ್ರಕರಣಗಳನ್ನು ಸೋತಿವೆ. ಸರ್ಕಾರದ ವಿರುದ್ಧ ಆದೇಶಗಳಾಗಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಶೇ 65ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಸೋಲು ಅನುಭವಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಮೇಲ್ಮನವಿಗಳ ಸಂಖ್ಯೆ ಹೆಚ್ಚಳದಿಂದ ವೆಚ್ಚವೂ ಅಧಿಕವಾಗಿದೆ ಎಂದು ಹೇಳಿದರು.
ಸರ್ಕಾರಿ ವಕೀಲರು ಮೌಖಿಕ ವಾದ-ಪ್ರತಿವಾದಗಳ ಜತೆಗೆ ಲಿಖಿತ ವಾದ-ಪ್ರತಿವಾದಗಳ ಸಲ್ಲಿಕೆಯನ್ನೂ ಕಡ್ಡಾಯಗೊಳಿಸಲಾಗಿದೆ. ಅದಕ್ಕಾಗಿ ಪ್ರಕ್ರಿಯೆಯ ವ್ಯಾಖ್ಯಾನ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.