ನಾಲ್ಕು ಕಂತುಗಳಲ್ಲಿ ಹಣ ಬಿಡುಗಡೆ: ಕಲಾವಿದರ ಆಕ್ರೋಶ
2023–24ನೇ ಸಾಲಿಗೆ ಸಾಮಾನ್ಯ ವರ್ಗದಲ್ಲಿ 831, ಪರಿಶಿಷ್ಟ ಜಾತಿ ಉಪ ಯೋಜನೆಯಡಿ 519 ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 97 ಸಂಘ–ಸಂಸ್ಥೆಗಳು ಧನಸಹಾಯ ಪಡೆದಿವೆ. 2024ರ ಮಾರ್ಚ್ನಲ್ಲಿ ಮೊದಲ ಕಂತು ಬಿಡುಗಡೆಯಾದರೆ, ನಾಲ್ಕನೇ ಕಂತು ಈ ವರ್ಷ ಕೈಸೇರಿದೆ. ಇದು ಕಲಾವಿದರು ಹಾಗೂ ಸಂಘ–ಸಂಸ್ಥೆಗಳ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅನುದಾನದ ಕೊರತೆ ನಡುವೆಯೂ ಫೆಬ್ರುವರಿ 1ರಿಂದ 8ರವರೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ₹ 1.32 ಕೋಟಿ ವೆಚ್ಚದಲ್ಲಿ ರಂಗ ಪರಿಷೆ ಕಾರ್ಯಕ್ರಮ ನಡೆಸಿ, ಇದಕ್ಕೆ ರಂಗಾಯಣಗಳ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಖಾತೆಗಳಲ್ಲಿ ಇರಿಸಲಾಗಿದ್ದ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇದು ಕೂಡ ಸಾಂಸ್ಕೃತಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ. ‘2024–25ನೇ ಆರ್ಥಿಕ ವರ್ಷದ ಕಡೆಯ ಹಂತದಲ್ಲಿದ್ದು, ಧನಸಹಾಯಕ್ಕೆ ಸಂಬಂಧಿಸಿ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಂದ ಈವರೆಗೂ ಅರ್ಜಿಗಳನ್ನು ಆಹ್ವಾನಿಸಿಲ್ಲ. ಇದರಿಂದ ಸಂಘ–ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಸರ್ಕಾರ ಧನಸಹಾಯ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದ ಕುಮಾರ್ ಕೆ.ಎಚ್. ತಿಳಿಸಿದರು.