ಬೆಂಗಳೂರು: ಪಾರ್ಟಿಯಲ್ಲಿ ಡಿ.ಜೆ ಆಗಿ ಪಾಲ್ಗೊಂಡು ಡ್ರಗ್ಸ್ ಸೇವಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮಗ ಸಿದ್ದಾಂತ್ ಅವರನ್ನು ಠಾಣೆ ಜಾಮೀನು ಮೇಲೆ ಸೋಮವಾರ ರಾತ್ರಿ ಬಿಡುಗಡೆ ಮಾಡಲಾಗಿದೆ.
ಟ್ರಿನಿಟಿ ವೃತ್ತದಲ್ಲಿರುವ ದಿ ಪಾರ್ಕ್ ಪಂಚತಾರಾ ಹೋಟೆಲ್ನ ಬಾರ್ನಲ್ಲಿ ಭಾನುವಾರ ರಾತ್ರಿ ಡ್ರಗ್ಸ್ ಪಾರ್ಟಿ ಆಯೋಜಿಸಲಾಗಿತ್ತು. ಹಲಸೂರು ಠಾಣೆ ಪೊಲೀಸರು, ಹೋಟೆಲ್ ಮೇಲೆ ದಾಳಿ ಮಾಡಿದ್ದರು.
ಡ್ರಗ್ಸ್ ಸೇವಿಸಿದ್ದ ಆರೋಪದಡಿ ಸಿದ್ದಾಂತ್ ಸೇರಿದಂತೆ ಐವರನ್ನು ಬಂಧಿಸಿದ್ದರು. ಎಲ್ಲರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಠಾಣೆ ಜಾಮೀನು ಮೇಲೆಯೇ ಬಿಡುಗಡೆ ಮಾಡಿದ್ದಾರೆ.
'ಎಲ್ಲ ಆರೋಪಿಗಳನ್ನು ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ, ಅವರನ್ನು ಪುನಃ ಠಾಣೆಗೆ ಕರೆಸಲಾಗುವುದು' ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.