ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚು ಒತ್ತು ನೀಡುತ್ತಾ ಜನಮನ ಗೆದ್ದಿರುವ ‘ಪ್ರಜಾವಾಣಿ’, ಇದೀಗ 151ನೇ ವರ್ಷದ ಗಾಂಧಿ ಜಯಂತಿಯನ್ನು ವಿನೂತನವಾಗಿ ಆಚರಿಸಲು ಹೊರಟಿದೆ.
ಇಂದು (ಅಕ್ಟೋಬರ್ 2) ದಿನವಿಡೀ ಪ್ರಜಾವಾಣಿ ಫೇಸ್ಬುಕ್ ಪುಟದಲ್ಲಿ (https://www.facebook.com/prajavani.net/), ಗಾಂಧಿ ಭಜನ್, ಗಾಂಧಿ ತತ್ವಗಳ ಉಪನ್ಯಾಸ, ವಿಶ್ವಶಾಂತಿಗಾಗಿ ಪ್ರಾರ್ಥನೆ ಹಾಗೂ ರಂಗ ರೂಪಕ -ಈ ನಾಲ್ಕು ಕಾರ್ಯಕ್ರಮಗಳು ಮೂಡಿಬರಲಿವೆ.
ಬೆಳಿಗ್ಗೆ 9:30ಕ್ಕೆ ಗದುಗಿನ ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರಿಂದ ಗಾಂಧೀಜಿಗೆ ಸ್ವರ ನಮನ ಕಾರ್ಯಕ್ರಮ ನಡೆಯಲಿದ್ದು, ಹಿಂದೂಸ್ತಾನಿ ಗಾಯಕ ಅಂಬರೀಷ್ ಕೊಂಡಗೂಳಿ ಸಹಕರಿಸಲಿದ್ದಾರೆ. ಸಂತೋಷ್ ಕೋಡ್ಲಿ ತಬಲಾ ನುಡಿಸಲಿದ್ದಾರೆ.
ಬೆಳಿಗ್ಗೆ 11:15ರಿಂದ ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಅವರಿಂದ ‘ತತ್ವ; ವ್ಯಕ್ತಿತ್ವ- ಗಾಂಧೀಜಿ ಜೀವನದಲ್ಲಿ ಪ್ರತಿಫಲನಗೊಂಡಂತೆ’ ಒಂದು ಗಂಟೆ ಉಪನ್ಯಾಸ ಕಾರ್ಯಕ್ರಮವು ಫೇಸ್ಬುಕ್ ಲೈವ್ ಮೂಲಕ ಮೂಡಿಬರಲಿದೆ.
ಸಂಜೆ 5.30ರಿಂದ 7ರವರೆಗೆ ಅಂತರರಾಷ್ಟ್ರೀಯ ಗಾಯಕಿ, ಪುಣೆಯ ಪಿ. ನಂದಿನಿ ರಾವ್ ಗುಜರ್ ಅವರಿಂದ ಕನ್ನಡ-ಹಿಂದಿ ಭಜನ್ ಸಹಿತ ‘ವಿಶ್ವ ಶಾಂತಿಗಾಗಿ ಪ್ರಾರ್ಥನೆ’ ಲೈವ್ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೊಳುವಾರು ಮಹಮದ್ ಕುಂಞಿ ಅವರ ಕಥೆ ಆಧಾರಿತ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಎಂಬ ರಂಗ ರೂಪಕವು ಎನ್.ಆರ್. ವಿಶುಕುಮಾರ್ ಪರಿಕಲ್ಪನೆಯಲ್ಲಿ, ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ಪ್ರಸ್ತುತಿಯಾಗಲಿದೆ.