ಬೆಂಗಳೂರು: ‘ಕೋವಿಡ್ ಹಾಗೂ ಲಾಕ್ಡೌನ್ನಿಂದ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಘೋಷಿಸಿದ್ದ ಪ್ಯಾಕೇಜ್ ಹಣವು ತಿಂಗಳು ಕಳೆದರೂ ತಲುಪಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲಚೇನಹಳ್ಳಿ, ಕೋಣನಕುಂಟೆ, ಅಂಜನಾಪುರ, ಗಣಪತಿಪುರ ಹಾಗೂ ಉತ್ತರಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಆರ್.ಕೆ. ರಮೇಶ್ ವತಿಯಿಂದ ಮೂವತ್ತು ಸಾವಿರ ದಿನಸಿ ಕಿಟ್ಗಳನ್ನು ಬುಧವಾರ ವಿತರಣೆ ಮಾಡಿ ಮಾತನಾಡಿದರು.
‘ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಮಾಡಿದ್ದ ಬಿಜೆಪಿ ಸರ್ಕಾರ, ಬರಿ ಸುಳ್ಳು ಘೋಷಣೆಗಳ ಜಾಹೀರಾತು ನೀಡುತ್ತಿದೆ. ಕೂಲಿ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದ ವಿವಿಧ ವರ್ಗದವರಿಗೆ ಈವರೆಗೂ ಪ್ಯಾಕೇಜ್ ಹಣ ಕೈಸೇರಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೀವನದ ಜತೆಗೆ ಆಟವಾಡುತ್ತಿದೆ’ ಎಂದರು.
ಸಂಸದ ಡಿ.ಕೆ. ಸುರೇಶ್,‘ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಒಂದು ರೂಪಾಯಿ ಏರಿಕೆಯಾದಾಗ ರಾಜ್ಯದ ಬಿಜೆಪಿ ನಾಯಕರು ಬೀದಿಗಿಳಿದು ಬೊಬ್ಬೆ ಹಾಕುತ್ತಿದ್ದರು. ಕೊರೊನಾ ಸಂಕಷ್ಟದಲ್ಲೂ ಅಗತ್ಯ ವಸ್ತುಗಳ ಬೆಲೆಯು ನಿತ್ಯ ಏರಿಕೆಯಾಗುತ್ತಿದೆ. ಕೋವಿಡ್ ಹೆಸರಿನಲ್ಲಿ ಸರ್ಕಾರವು ಲಕ್ಷಾಂತರ ಕೋಟಿ ರೂಪಾಯಿ ಹಣಲೂಟಿ ಮಾಡಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.