<p><strong>ಉಡುಪಿ:</strong> ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವು ಕಡೆಗಳಲ್ಲಿ ನೆರೆ ಸೃಷ್ಟಿಯಾಗಿದೆ. ನಗರದಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.</p>.<p>ಬಡಗುಪೇಟೆ, ಬನ್ನಂಜೆ, ಮಠದಬೆಟ್ಟು, ಕಲ್ಸಂಕ, ಗುಂಡಿಬೈಲು, ಮೂಡುಸಗ್ರಿ, ಕೊಡವೂರು, ಕಿನ್ನಿಮೂಲ್ಕಿ, ಆದಿ ಉಡುಪಿ, ಬೈಲಕೆರೆ ಪ್ರದೇಶಗಳು ದ್ವೀಪದಂತಾಗಿವೆ. ಗುಂಡಿಬೈಲು–ಕಲ್ಸಂಕ ರಸ್ತೆ ಸಂಚಾರ ಬಂದ್ ಆಗಿದೆ. 169 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಉಡುಪಿ ಮಣಿಪಾಲ್ ರಸ್ತೆಯೂ ಜಲಾವೃತವಾಗಿದ್ದು, ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ.</p>.<p>ಹಲವರು ಮನೆಯಿಂದ ಹೊರಬಾರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೋಟ್ಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಕೃಷ್ಣಮಠದ ರಾಜಾಂಗಣಕ್ಕೂ ನೀರು ನುಗ್ಗಿದೆ. ಮಠದ ಪಾರ್ಕಿಂಗ್ ಪ್ರದೇಶ ಕೆರೆಯಂತಾಗಿದ್ದು, ಹಲವು ವಾಹನಗಳು ಭಾಗಶಃ ಮುಳುಗಿಹೋಗಿವೆ.</p>.<p>ಸ್ವರ್ಣಾ ನದಿ ತುಂಬಿ ಹರಿಯುತ್ತಿದ್ದು, ಪೆರ್ಡೂರು ಪಟ್ಟಣ ಜಲಾವೃತವಾಗಿದೆ. ಪುತ್ತಿಗೆ ವಿದ್ಯಾಪೀಠದ ಬಳಿ ನೀರಿನ ಮಟ್ಟ ಏರಿಕೆಯಾಗಿದೆ. ಕಾರ್ಕಳ ತಾಲ್ಲೂಕಿನ ಎಣ್ಣಹೊಳೆ, ಹೆರ್ಮುಂಡೆಯಲ್ಲಿ ಹಲವು ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ ರಾಜ್ಯ ಹೆದ್ದಾರಿ 1 ಕಾರ್ಕಳ ಅಜೆಕಾರು ರಸ್ತೆ ಸಂಪರ್ಕ ಕಡಿತಗೊಂಡಿದೆ.</p>.<p><strong>ಮಲ್ಪೆಯಲ್ಲಿ ದೋಣಿಗಳು ಮುಳಗಡೆ </strong></p>.<p>ಭಾರಿ ಮಳೆಗೆ ಮಲ್ಪೆಯಲ್ಲಿ ಮೂರು ಬೋಟ್ಗಳು ಮುಳುಗಡೆಯಾಗಿವೆ. ಮೀನುಗಾರರು ಕಲ್ಲುಬಂಡೆಗಳ ಮೇಲೆ ಆಶ್ರಯ ಪಡೆದು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಎನ್ಡಿಆರ್ಎಫ್ ತಂಡ ಕಳುಹಿಸುವಂತೆ ಮಂಗಳೂರು ಜಿಲ್ಲಾಧಿಕಾರಿಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.</p>.<p>ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ತಂಡ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>