<p><strong>ಬೆಂಗಳೂರು:</strong> ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್’ ಕಂಪನಿಯ ಮಾಜಿ ಆಡಳಿತ ಮಂಡಳಿಯು, ಕಂಪನಿಯನ್ನು ಮುಚ್ಚುವ ಮೊದಲು ತನ್ನ ಬಳಿಯಿದ್ದ ಬಹುಕೋಟಿ ಮೌಲ್ಯದ 6 ಎಕರೆ 29 ಗುಂಟೆ ಜಮೀನು ಮತ್ತು ಆಸ್ತಿಗಳನ್ನು ತನ್ನದೇ ಶಿಕ್ಷಣ ಸಂಸ್ಥೆಯಾಗಿರುವ, ‘ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್’ಗೆ (ಕೆಐಎಎಂಎಸ್) ವರ್ಗಾಯಿಸುವ ಮೂಲಕ ‘ಗುತ್ತಿಗೆ ಪತ್ರ (ಲೀಸ್ ಡೀಡ್) ಕಾರ್ಯಗತಗೊಳಿಸಿರುವುದು ಕಾನೂನು ಬಾಹಿರ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.</p>.<p>ಕಂಪನಿ ನ್ಯಾಯಾಲಯ 2015ರ ಜುಲೈ 21ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ, ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಕಂಪನಿ’ಯ ‘ಅಧಿಕೃತ ಲಿಕ್ವಿಡೇಟರ್’ (ಬರ್ಖಾಸ್ತುದಾರ) ಸಲ್ಲಿಸಿದ್ದ ‘ಮೂಲ ಮೇಲ್ಮನವಿ’ಯನ್ನು (ಒಎಸ್ಎ) ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.</p>.<p>ಈ ಕುರಿತಾದ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದ್ದು, ‘ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಹರಾಜಿಗೆ ಇರಿಸಿ’ ಎಂದು ಮೇಲ್ಮನವಿದಾರರೂ ಆದ ಹೈಕೋರ್ಟ್ನಿಂದ ನೇಮಕಗೊಂಡಿರುವ ಅಧಿಕೃತ ಲಿಕ್ವಿಡೇಟರ್ಗೆ (ಒಎಲ್) ನಿರ್ದೇಶಿಸಿದೆ.</p>.<p>‘ಮುಚ್ಚುವ ಹಂತದಲ್ಲಿದ್ದ ಕಂಪನಿಯು ತನ್ನ ಸಾಲಗಾರರು ಮತ್ತು ಷೇರುದಾರರ ಹಿತಾಸಕ್ತಿ ಬಲಿಕೊಟ್ಟು, ಕೇವಲ ತನಗೆ ಸಂಬಂಧಿಸಿದ ಸಂಸ್ಥೆಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಈ ಲೀಸ್ ಡೀಡ್ ಕಾರ್ಯಗತಗೊಳಿಸಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ‘ಕೂಡಲೇ ಆಸ್ತಿಯನ್ನು ವಶಕ್ಕೆ ಪಡೆದು ಸಾರ್ವಜನಿಕ ಹರಾಜು ಮೂಲಕ ಬಾಕಿದಾರರಿಗೆ ಹಣ ಮರುಪಾವತಿಸಬೇಕು’ ಎಂದು ಲಿಕ್ವಿಡೇಟರ್ಗೆ ತಾಕೀತು ಮಾಡಿದೆ.</p>.<p>ಅಂತೆಯೇ, ‘ಅಧಿಕೃತ ಲಿಕ್ವಿಡೇಟರ್, ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವತನಕ ಕೆಐಎಎಂಎಸ್ ತನ್ನ ಸ್ವಾಧೀನದಲ್ಲಿರುವ ಸ್ವತ್ತುಗಳ ಮಾರುಕಟ್ಟೆ ಬಾಡಿಗೆಯನ್ನು ಪಾವತಿಸಲು ಬಾಧ್ಯಸ್ಥವಾಗಿರುತ್ತದೆ. ಒಂದು ವೇಳೆ ಕೆಐಎಎಂಎಸ್ ಬಯಸಿದರೆ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲೂ ಭಾಗವಹಿಸಬಹುದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.</p>.<h2>ಪ್ರಕರಣ: </h2><p>ಕಂಪನಿ ನ್ಯಾಯಾಲಯ 2004ರ ಏಪ್ರಿಲ್ 1ರಂದು ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಕಂಪನಿಯನ್ನು ಮುಕ್ತಾಯಗೊಳಿಸಲು ಆದೇಶಿಸಿತ್ತು. ಈ ಆದೇಶ ಹೊರಬೀಳುವ ಮೊದಲು ಅಂದರೆ 2000 ಜನವರಿ 22ರಂದು, ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ನ ಮಾಜಿ ಆಡಳಿತ ಮಂಡಳಿ’ ಕೆಐಎಎಂಎಸ್ ಜೊತೆಗಿನ ಆಸ್ತಿ ವರ್ಗಾವಣೆಯ 28 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಜಾರಿಗೊಳಿಸಿತ್ತು.</p>.<p>ತದನಂತರ ಕೆಐಎಎಂಎಸ್, ಹರಿಹರ ತಾಲ್ಲೂಕಿನ ಸರ್ವೇ ನಂಬರ್ 23 ಮತ್ತು 27ರ ವ್ಯಾಪ್ತಿಯಲ್ಲಿ ಒಟ್ಟು 6 ಎಕರೆ, 29 ಗುಂಟೆ ಜಮೀನನ್ನು ಹಾಗೂ ಈ ಜಮೀನಿನಲ್ಲಿರುವ ಕಟ್ಟಡಗಳು, ರಚನೆಗಳು, ಸೌಲಭ್ಯಗಳು, ಸೌಕರ್ಯಗಳು, ಸ್ಥಾವರಗಳು ಮತ್ತು ಯಂತ್ರೋಪಕರಣಗಳನ್ನು ತನ್ನ ವಶಕ್ಕೆ ಪಡೆದಿತ್ತು. ಬಹುಕೋಟಿ ಮೌಲ್ಯದ ಈ ಆಸ್ತಿಯನ್ನು ತಿಂಗಳಿಗೆ ₹1,250ರ ಮೊತ್ತಕ್ಕೆ ಗುತ್ತಿಗೆ ನೀಡಲಾಗಿತ್ತು.</p>
<p><strong>ಬೆಂಗಳೂರು:</strong> ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್’ ಕಂಪನಿಯ ಮಾಜಿ ಆಡಳಿತ ಮಂಡಳಿಯು, ಕಂಪನಿಯನ್ನು ಮುಚ್ಚುವ ಮೊದಲು ತನ್ನ ಬಳಿಯಿದ್ದ ಬಹುಕೋಟಿ ಮೌಲ್ಯದ 6 ಎಕರೆ 29 ಗುಂಟೆ ಜಮೀನು ಮತ್ತು ಆಸ್ತಿಗಳನ್ನು ತನ್ನದೇ ಶಿಕ್ಷಣ ಸಂಸ್ಥೆಯಾಗಿರುವ, ‘ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್’ಗೆ (ಕೆಐಎಎಂಎಸ್) ವರ್ಗಾಯಿಸುವ ಮೂಲಕ ‘ಗುತ್ತಿಗೆ ಪತ್ರ (ಲೀಸ್ ಡೀಡ್) ಕಾರ್ಯಗತಗೊಳಿಸಿರುವುದು ಕಾನೂನು ಬಾಹಿರ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.</p>.<p>ಕಂಪನಿ ನ್ಯಾಯಾಲಯ 2015ರ ಜುಲೈ 21ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ, ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಕಂಪನಿ’ಯ ‘ಅಧಿಕೃತ ಲಿಕ್ವಿಡೇಟರ್’ (ಬರ್ಖಾಸ್ತುದಾರ) ಸಲ್ಲಿಸಿದ್ದ ‘ಮೂಲ ಮೇಲ್ಮನವಿ’ಯನ್ನು (ಒಎಸ್ಎ) ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.</p>.<p>ಈ ಕುರಿತಾದ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದ್ದು, ‘ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಹರಾಜಿಗೆ ಇರಿಸಿ’ ಎಂದು ಮೇಲ್ಮನವಿದಾರರೂ ಆದ ಹೈಕೋರ್ಟ್ನಿಂದ ನೇಮಕಗೊಂಡಿರುವ ಅಧಿಕೃತ ಲಿಕ್ವಿಡೇಟರ್ಗೆ (ಒಎಲ್) ನಿರ್ದೇಶಿಸಿದೆ.</p>.<p>‘ಮುಚ್ಚುವ ಹಂತದಲ್ಲಿದ್ದ ಕಂಪನಿಯು ತನ್ನ ಸಾಲಗಾರರು ಮತ್ತು ಷೇರುದಾರರ ಹಿತಾಸಕ್ತಿ ಬಲಿಕೊಟ್ಟು, ಕೇವಲ ತನಗೆ ಸಂಬಂಧಿಸಿದ ಸಂಸ್ಥೆಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಈ ಲೀಸ್ ಡೀಡ್ ಕಾರ್ಯಗತಗೊಳಿಸಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ‘ಕೂಡಲೇ ಆಸ್ತಿಯನ್ನು ವಶಕ್ಕೆ ಪಡೆದು ಸಾರ್ವಜನಿಕ ಹರಾಜು ಮೂಲಕ ಬಾಕಿದಾರರಿಗೆ ಹಣ ಮರುಪಾವತಿಸಬೇಕು’ ಎಂದು ಲಿಕ್ವಿಡೇಟರ್ಗೆ ತಾಕೀತು ಮಾಡಿದೆ.</p>.<p>ಅಂತೆಯೇ, ‘ಅಧಿಕೃತ ಲಿಕ್ವಿಡೇಟರ್, ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವತನಕ ಕೆಐಎಎಂಎಸ್ ತನ್ನ ಸ್ವಾಧೀನದಲ್ಲಿರುವ ಸ್ವತ್ತುಗಳ ಮಾರುಕಟ್ಟೆ ಬಾಡಿಗೆಯನ್ನು ಪಾವತಿಸಲು ಬಾಧ್ಯಸ್ಥವಾಗಿರುತ್ತದೆ. ಒಂದು ವೇಳೆ ಕೆಐಎಎಂಎಸ್ ಬಯಸಿದರೆ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲೂ ಭಾಗವಹಿಸಬಹುದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.</p>.<h2>ಪ್ರಕರಣ: </h2><p>ಕಂಪನಿ ನ್ಯಾಯಾಲಯ 2004ರ ಏಪ್ರಿಲ್ 1ರಂದು ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಕಂಪನಿಯನ್ನು ಮುಕ್ತಾಯಗೊಳಿಸಲು ಆದೇಶಿಸಿತ್ತು. ಈ ಆದೇಶ ಹೊರಬೀಳುವ ಮೊದಲು ಅಂದರೆ 2000 ಜನವರಿ 22ರಂದು, ‘ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ನ ಮಾಜಿ ಆಡಳಿತ ಮಂಡಳಿ’ ಕೆಐಎಎಂಎಸ್ ಜೊತೆಗಿನ ಆಸ್ತಿ ವರ್ಗಾವಣೆಯ 28 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಜಾರಿಗೊಳಿಸಿತ್ತು.</p>.<p>ತದನಂತರ ಕೆಐಎಎಂಎಸ್, ಹರಿಹರ ತಾಲ್ಲೂಕಿನ ಸರ್ವೇ ನಂಬರ್ 23 ಮತ್ತು 27ರ ವ್ಯಾಪ್ತಿಯಲ್ಲಿ ಒಟ್ಟು 6 ಎಕರೆ, 29 ಗುಂಟೆ ಜಮೀನನ್ನು ಹಾಗೂ ಈ ಜಮೀನಿನಲ್ಲಿರುವ ಕಟ್ಟಡಗಳು, ರಚನೆಗಳು, ಸೌಲಭ್ಯಗಳು, ಸೌಕರ್ಯಗಳು, ಸ್ಥಾವರಗಳು ಮತ್ತು ಯಂತ್ರೋಪಕರಣಗಳನ್ನು ತನ್ನ ವಶಕ್ಕೆ ಪಡೆದಿತ್ತು. ಬಹುಕೋಟಿ ಮೌಲ್ಯದ ಈ ಆಸ್ತಿಯನ್ನು ತಿಂಗಳಿಗೆ ₹1,250ರ ಮೊತ್ತಕ್ಕೆ ಗುತ್ತಿಗೆ ನೀಡಲಾಗಿತ್ತು.</p>