ಹೊಸಪೇಟೆ: ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಮನವೊಲಿಕೆಗೆ ಜಗ್ಗದ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ವಿಜಯನಗರ ಕ್ಷೇತ್ರದ ಉಪಚುನಾವಣೆ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.
ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಿತ್ತು. ಆದರೆ, ಕವಿರಾಜ ನಾಮಪತ್ರ ವಾಪಸ್ ಪಡೆಯಲಿಲ್ಲ. ‘ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನಗೆ ಅನ್ಯಾಯವಾಗಿದೆ. ಹಾಗಾಗಿ ಚುನಾವಣೆಗೆ ನಿಂತಿದ್ದೇನೆ. ನಾನು ಗೆದ್ದ ನಂತರ ಪುನಃ ಬಿಜೆಪಿಗೆ ಸೇರಿ ಆ ಪಕ್ಷದ ಋಣ ತೀರಿಸುತ್ತೇನೆ’ ಎಂದು ಹೇಳಿದರು.
‘ನನಗೆ ಬಿಜೆಪಿ ಮೇಲಾಗಲಿ ಅಥವಾ ಆ ಪಕ್ಷದ ಮುಖಂಡರ ಮೇಲಾಗಲಿ ಅಸಮಾಧಾನವಿಲ್ಲ. ಪಕ್ಷಕ್ಕೆ ಮೋಸ ಮಾಡಿದ ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬೇಸರವಿದೆ’ ಎಂದು ತಿಳಿಸಿದರು.