ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದ ಚಿಕ್ಕ ಮೂರ್ತಿಯ ದೊಡ್ಡ ಕೀರ್ತಿ

ಚಿತ್ರದುರ್ಗದ ಚಿಕ್ಕ ಮೂರ್ತಿಯ ದೊಡ್ಡ ಕೀರ್ತಿ
Last Updated 25 ನವೆಂಬರ್ 2018, 20:44 IST
ಅಕ್ಷರ ಗಾತ್ರ

ಹೇಳಿಕೊಳ್ಳುವಂತಹ ವಿದ್ಯಾರ್ಹತೆಗಳಿಲ್ಲದೆ ಹೋದರೂ ಹರಿತ ಬುದ್ಧಿಶಕ್ತಿ ಮತ್ತು ಸದಾ ಎಚ್ಚರವಾಗಿದ್ದ ಲೌಕಿಕ ವ್ಯಾವಹಾರಿಕ ಪ್ರಜ್ಞೆ ಹಾಗೂ ವಿಶಿಷ್ಟ ದಿಟ್ಟತನವು ಬೇರು ಮಟ್ಟದ ರಾಜಕೀಯ ಕಾರ್ಯಕರ್ತನೊಬ್ಬನನ್ನು ದೆಹಲಿಯ ಶಕ್ತಿರಾಜಕಾರಣದಲ್ಲಿ ಕೂರಿಸಬಲ್ಲದು ಎಂಬುದಕ್ಕೆ ಚಳ್ಳಕೆರೆ ಅಬ್ದುಲ್ ಕರೀಂ ಜಾಫರ್ ಷರೀಫ್ ಜ್ವಲಂತ ಸಾಕ್ಷಿ.

ಕಾಲ ಕಾಲಕ್ಕೆ ಬದಲಾದ ರಾಜಕೀಯ ಸನ್ನಿವೇಶಗಳು ಮತ್ತು ನಾಯಕರಿಗೆ ಹೊಂದಾಣಿಕೆ ಮಾಡಿಕೊಳ್ಳುವ ಗುಣದಿಂದಾಗಿಯೇ ಚಿತ್ರದುರ್ಗದ ಕಾಂಗ್ರೆಸ್ ಕಚೇರಿ ಸಹಾಯಕನ ಹಂತದಿಂದ ಇಂದಿರಾ ಗಾಂಧಿಯವರ ವಿಶ್ವಾಸ ಸಂಪಾದಿಸಿದ ಎತ್ತರ ಏರಿದರು.

ಕರ್ನಾಟಕದಿಂದ ರೈಲ್ವೆ ಸಚಿವರಾದ ಹಲವು ದಿಗ್ಗಜರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಅವರದು. ಭಾರತದ ರೈಲ್ವೆ ಭೂಪಟದ ಮೂಲೆಯಲ್ಲೆಲ್ಲೋ ಅದುಮಿ ಹೋಗಿದ್ದ ರಾಜ್ಯಕ್ಕೆ ನ್ಯಾಯ ಸಲ್ಲಿಸಿದ ಮೊದಲಿಗರು. ಕೆಂಗಲ್ ಹನುಮಂತಯ್ಯ ಅವರ ಯೂನಿಗೇಜ್ ಕನಸನ್ನು ನನಸಾಗಿಸಿದರು. ಭಾರತೀಯ ರೈಲ್ವೆಯಲ್ಲಿ ದೊಡ್ಡ ಕಾಂಟ್ರಾಕ್ಟರುಗಳು ರಚಿಸಿಕೊಂಡಿದ್ದ ಹಿತಾಸಕ್ತಿ ಕೂಟವನ್ನು ಒಡೆದು ಸಣ್ಣ ಗುತ್ತಿಗೆದಾರರಿಗೂ ಅವಕಾಶ ನೀಡಿದವರು. ಈ ಸಂಬಂಧ ಅವರ ವಿರುದ್ಧ ಭ್ರಷ್ಟಾಚಾರದ ಆಪಾದನೆ ಮಾಡಿದ್ದರು ಕರ್ನಾಟಕ ಮೂಲದ ಮತ್ತೊಬ್ಬ ಮಹಾರಥಿ ಜಾರ್ಜ್ ಫರ್ನಾಂಡಿಸ್. ಕಾಲಾನುಕ್ರಮದಲ್ಲಿ ನಿಜದ ಅರಿವಾಗಿ ಪಶ್ಚಾತ್ತಾಪಪಟ್ಟರು.

ಜಾಫರ್‌ ಷರೀಫ್‌ ನಿಧನ

ಬೆಂಗಳೂರು: ಹಿರಿಯ ಕಾಂಗ್ರೆಸಿಗ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್ (85) ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಇದೇ 23 ರ ಶುಕ್ರವಾರ ನಮಾಜ್‌ ಮಾಡುವ ಸಂದರ್ಭ ಅವರುಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದರು. ಅವರನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12.30 ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಷರೀಫ್‌ ಅವರ ಪತ್ನಿ ಅಮೀನಬಿ ಮತ್ತು ಹಿರಿಯ ಪುತ್ರ ಅಬ್ದುಲ್ ಕರೀಮ್‌, ಕಿರಿಯ ಪುತ್ರ ಖಾದರ್‌ ನವಾಜ್‌ ಷರೀಫ್‌ ಈ ಹಿಂದೆಯೇ ನಿಧನರಾಗಿದ್ದಾರೆ. ಷರೀಫ್‌ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರು ಮೊಮ್ಮಕ್ಕಳಿದ್ದಾರೆ.

ವೀರೇಂದ್ರ ಪಾಟೀಲ್, ದೇವರಾಜ ಅರಸು, ಬಂಗಾರಪ್ಪ ಸೇರಿದಂತೆ ರಾಜ್ಯದ ಹಲವು ಮುಖ್ಯಮಂತ್ರಿಗಳ ಮಗ್ಗುಲ ಮುಳ್ಳಾಗಿ ಪರಿಣಮಿಸಿದ ಅವರ ಪಾತ್ರದ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಕುಮ್ಮಕ್ಕು ಇದ್ದದ್ದನ್ನು ಯಾರೂ ಅಲ್ಲಗಳೆಯಲಾರರು. ಎರಡನೆಯ ಬಾರಿಗೆ ಮುಖ್ಯಮಂತ್ರಿಯಾದ ಪಾಟೀಲರ ಪದಚ್ಯುತಿಯಲ್ಲಿ ಷರೀಫರ ಪಾತ್ರ ದೊಡ್ಡದಿತ್ತು. ಸುದೀರ್ಘ ಸಂಸದೀಯ ಬದುಕಿನಲ್ಲಿ ಇಂದಿರಾಗಾಂಧಿ ತರುವಾಯ ಹಲವು ಕಾಂಗ್ರೆಸ್ ಅಧ್ಯಕ್ಷರ ನಿಕಟ ಸಂಪರ್ಕದಲ್ಲಿ ಕೆಲಸ ಮಾಡಿದ ಅನುಭವಿ.

1980ರ ಸೆಪ್ಟಂಬರ್ ನಲ್ಲಿ ಅತ್ಯುತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಪತ್ರಿಕಾ ಕಚೇರಿಗಳಿಗೆ ಜಡಿದ ಬೀಗಗಳನ್ನು ತೆಗೆಸುವಲ್ಲಿ ಷರೀಫ್ ಪಾತ್ರವಿತ್ತು. ಆಗ ದೆಹಲಿಯಲ್ಲಿದ್ದ ಲೋಕಸಭಾ ಸದಸ್ಯರಾದ ಎಚ್.ಎನ್.ನಂಜೇಗೌಡ ಮತ್ತು ಜಿ.ವೈ.ಕೃಷ್ಣನ್ ಅವರು ಮುಂಜಾನೆ ಆರೂವರೆಗೆ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿ ಈ ವಿಷಯ ತಿಳಿಸಿದರೆ, ಇತ್ತ ಬೆಂಗಳೂರಿನಿಂದ ಷರೀಫ್, ಇಂದಿರಾ ಜೊತೆ ದೂರವಾಣಿಯಲ್ಲಿ ಮಾತಾಡಿದ್ದರು.

ಬೆಳಿಗ್ಗೆ ಆರೂವರೆಗೆ ರಾಜ್ಯಪಾಲ ಗೋವಿಂದನಾರಾಯಣ್ ಬಳಿ ತೆರಳಿದ್ದರು. ಇಂದಿರಾ ಸೂಚನೆಯಂತೆ ಗೋವಿಂದ ನಾರಾಯಣ್ ಅವರು ಅಂದಿನ ಪೊಲೀಸ್ ಮಹಾನಿರ್ದೇಶಕ ಗರುಡಾಚಾರ್ ಅವರನ್ನು ಕರೆಯಿಸಿ ಬೀಗಗಳನ್ನು ತೆಗೆಯಿಸುವಂತೆ ಆದೇಶ ನೀಡಿದ್ದರು. ಏಳೂವರೆಯ ಹೊತ್ತಿಗೆ ಬೆಂಗಳೂರಿನ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಕಚೇರಿಗಳಿಗೆ ಜಡಿದಿದ್ದ ಬೀಗಗಳನ್ನು ತೆಗೆಯಿಸಲಾಗಿತ್ತು.

ಷರೀಫ್ ಅವರ ಕಾಂಗ್ರೆಸ್ ನಿಷ್ಠೆ ಆಗಾಗ ಆಲುಗಿದ ಮಾತುಗಳು ಕೇಳಿ ಬಂದರೂ ಕಡೆಯ ಉಸಿರಿನ ತನಕ ಬದಲಾಗಲಿಲ್ಲ. ಅಲುಗಿದಂತೆ ಕಂಡು ಬಂದಾಗಲೆಲ್ಲ ರಾಜಕೀಯ ವಿಶ್ಲೇಷಕರಿಗೆ ಅವರ ವರ್ತನೆ ಒಗಟಾಗಿ ಪರಿಣಮಿಸುತ್ತಿತ್ತು. ಅನ್ಯಾಯ ಆದಾಗ ಪಕ್ಷ ತೊರೆವ ಬೆದರಿಕೆ ಹಾಕಿದ್ದು ನಿಜ. ಆದರೆ, ಜೀವಮಾನವಿಡೀ ಕಳೆದ ಪಕ್ಷವನ್ನು ತೊರೆಯುವುದಾದರೂ ಹೇಗೆ ಎನ್ನುತ್ತಿದ್ದರು.

ಕಾಂಗ್ರೆಸ್ ಇಬ್ಘಾಗದ 1969-70ರ ದಿನಗಳಲ್ಲಿ ಸಿಂಡಿಕೇಟ್ ಬಣದ ಮುಖ್ಯಸ್ಥರಾಗಿದ್ದ ಎಸ್. ನಿಜಲಿಂಗಪ್ಪನವರ ರಣತಂತ್ರಗಳನ್ನು ಷರೀಫ್ ಅವರು ಇಂದಿರಾ ಅವರಿಗೆ ಮುಟ್ಟಿಸುತ್ತಿದ್ದರೆಂಬ ಮಾತುಗಳಿದ್ದವು. ಇಂದಿರಾ ವಿಶ್ವಾಸ ಗಳಿಸಿದ ಅವರಿಗೆ 1971ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರಿಕೆ ಒಲ್ಲದಿದ್ದರೂ ಒಲಿಯಿತು. ಕ್ಷೇತ್ರಕ್ಕೆ ಹೊರಗಿನವರಾದರೂ ನಿಜಲಿಂಗಪ್ಪ ಅವರ ಅಳಿಯ ಎಂ.ವಿ.ರಾಜಶೇಖರನ್ (ಕಾಂಗ್ರೆಸ್-ಎಸ್) ವಿರುದ್ಧ ಇಂದಿರಾ ಗಾಳಿಯಲ್ಲಿ ಗೆದ್ದರು ಕೂಡ.

1979ರಲ್ಲಿ ದೇವರಾಜ ಅರಸು ಅವರು ಇಂದಿರಾ ಅವರನ್ನು ತೊರೆದು ಬೇರೆ ದಾರಿ ಹಿಡಿದಾಗಲೂ ಇಂದಿರಾಗೆ ನಿಷ್ಠರಾಗಿ ಉಳಿದವರು ಷರೀಫ್. 1980ರಲ್ಲಿ ಇಂದಿರಾ ಅಧಿಕಾರಕ್ಕೆ ಮರಳಿದ ನಂತರ ರೈಲ್ವೆ ರಾಜ್ಯ ಮಂತ್ರಿಯಾದರು. ರಾಜೀವ್ ಮಂತ್ರಿಮಂಡಲದಲ್ಲಿ ಕಲ್ಲಿದ್ದಲು ಖಾತೆ ನಿರ್ವಹಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಆದರು. ಕಾಲ ಕಾಲಕ್ಕೆ ಬದಲಾದ ರಾಜಕೀಯ ಸನ್ನಿವೇಶಗಳು ಮತ್ತು ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡದ್ದು ಅವರ ಸುದೀರ್ಘ ರಾಜಕಾರಣದ ರಹಸ್ಯ.

ಕೇಂದ್ರ ಮಂತ್ರಿಯಾಗಿದ್ದ ಅವರ ಉನ್ನತಿಯ ದಿನಗಳಲ್ಲಿ ದೆಹಲಿಯ ಅವರ ಅಕ್ಬರ್ ರಸ್ತೆಯ 17ನೆಯ ನಂಬರಿನ ಅವರ ಸರ್ಕಾರಿ ಬಂಗಲೆಯ ಬಾಗಿಲುಗಳು ಕನ್ನಡಿಗರ ಪಾಲಿಗೆ ಹಗಲಿರುಳೂ ತೆರೆದದ್ದನ್ನು ಹಳಬರು ಈಗಲೂ ನೆನೆಯುತ್ತಾರೆ. ಬಂದವರಿಗೆಲ್ಲ ಅಲ್ಲಿ ಚಹಾದ ಬದಲಿಗೆ ಖೀರನ್ನು ನೀಡಲಾಗುತ್ತಿತ್ತು. ವಿಮಾನಪ್ರಯಾಣ ಗಗನಕುಸುಮ ಆಗಿದ್ದ ಅಂದಿನ ದಿನಗಳಲ್ಲಿ ಫಜೀತಿಯಲ್ಲಿದ್ದ ಕನ್ನಡಿಗರಿಗೆ ರೈಲ್ವೆ ಪಾಸುಗಳು, ಮೀಸಲಿರಿಸಿದ ಟಿಕೆಟುಗಳು ಧಾರಾಳವಾಗಿ ದೊರೆಯುತ್ತಿದ್ದವು.

2000 ಇಸವಿಯ ನಂತರ ಅವರ ರಾಜಕೀಯ ಬದುಕಿನ ಇಳಿಎಣಿಕೆ ಆರಂಭ ಆಗಿತ್ತು. ಅಲ್ಲಿಗೆ ಹೆಚ್ಚು ಕಡಿಮೆ ಅವರು ದೆಹಲಿಯ ಶಿಖರ ರಾಜಕಾರಣದಿಂದ ಕೆಳ ಜಾರಿದ್ದರು. ಭ್ರಷ್ಟಾಚಾರದ ಆಪಾದನೆಗಳನ್ನು ಬಹು ಎಚ್ಚರಿಕೆಯಿಂದ ದಾಟಿದ್ದ ಅವರು ಎಬಿಬಿ ವ್ಯಾಗನ್ ಪ್ರಕರಣದಲ್ಲಿ ಎಡವಿದ್ದರು. ಆದಾಯ ಮೀರಿದ ಆಸ್ತಿಪಾಸ್ತಿ ಗಳಿಕೆಯ ಆರೋಪ ಎದುರಿಸಿದರು.

ದೇಶದ ರಾಜಕಾರಣ ತಮ್ಮನ್ನು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯ ಎರಕದಲ್ಲಿ ಅಚ್ಚು ಮಾಡಲಿಲ್ಲ, ಬದಲಾಗಿ ಮುಖ್ಯವಾಹಿನಿಯ ರಾಜಕಾರಣಿಯಂತೆ ನಡೆಸಿಕೊಂಡಿತು. ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಹೊಸ ಮುಸ್ಲಿಂ ಚಹರೆಗಳು ಹೊಮ್ಮುತ್ತಿದ್ದಂತೆ ಅವರು ಹಿನ್ನೆಲೆಗೆ ಸರಿಯಬೇಕಾಗಿ ಬಂದಿತ್ತು. ಮಕ್ಕಳನ್ನು ಕಳೆದುಕೊಂಡ ದುರಂತದ ವೃದ್ಧಾಪ್ಯ ಅವರದಾಗಿತ್ತು. ಮೊಮ್ಮಗನಿಗೆ ರಾಜಕೀಯ ನೆಲೆ ಕಲ್ಪಿಸುವಲ್ಲಿ ಮತ್ತಷ್ಟು ಹಣ್ಣಾದರು.

ಬೆಳಿಗ್ಗೆ ಆರೂವರೆಗೆ ರಾಜ್ಯಪಾಲ ಗೋವಿಂದನಾರಾಯಣ್ ಬಳಿ ತೆರಳಿದ್ದರು. ಇಂದಿರಾ ಸೂಚನೆಯಂತೆ ಗೋವಿಂದ ನಾರಾಯಣ್ ಅವರು ಅಂದಿನ ಪೊಲೀಸ್ ಮಹಾನಿರ್ದೇಶಕ ಗರುಡಾಚಾರ್ ಅವರನ್ನು ಕರೆಯಿಸಿ ಬೀಗಗಳನ್ನು ತೆಗೆಯಿಸುವಂತೆ ಆದೇಶ ನೀಡಿದ್ದರು. ಏಳೂವರೆಯ ಹೊತ್ತಿಗೆ ಬೆಂಗಳೂರಿನ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಕಚೇರಿಗಳಿಗೆ ಜಡಿದಿದ್ದ ಬೀಗಗಳನ್ನು ತೆಗೆಯಿಸಲಾಗಿತ್ತು.

ಷರೀಫ್ ಅವರ ಕಾಂಗ್ರೆಸ್ ನಿಷ್ಠೆ ಆಗಾಗ ಆಲುಗಿದ ಮಾತುಗಳು ಕೇಳಿ ಬಂದರೂ ಕಡೆಯ ಉಸಿರಿನ ತನಕ ಬದಲಾಗಲಿಲ್ಲ. ಅಲುಗಿದಂತೆ ಕಂಡು ಬಂದಾಗಲೆಲ್ಲ ರಾಜಕೀಯ ವಿಶ್ಲೇಷಕರಿಗೆ ಅವರ ವರ್ತನೆ ಒಗಟಾಗಿ ಪರಿಣಮಿಸುತ್ತಿತ್ತು. ಅನ್ಯಾಯ ಆದಾಗ ಪಕ್ಷ ತೊರೆವ ಬೆದರಿಕೆ ಹಾಕಿದ್ದು ನಿಜ. ಆದರೆ, ಜೀವಮಾನವಿಡೀ ಕಳೆದ ಪಕ್ಷವನ್ನು ತೊರೆಯುವುದಾದರೂ ಹೇಗೆ ಎನ್ನುತ್ತಿದ್ದರು.

ಕಾಂಗ್ರೆಸ್ ಇಬ್ಘಾಗದ 1969-70ರ ದಿನಗಳಲ್ಲಿ ಸಿಂಡಿಕೇಟ್ ಬಣದ ಮುಖ್ಯಸ್ಥರಾಗಿದ್ದ ಎಸ್. ನಿಜಲಿಂಗಪ್ಪನವರ ರಣತಂತ್ರಗಳನ್ನು ಷರೀಫ್ ಅವರು ಇಂದಿರಾ ಅವರಿಗೆ ಮುಟ್ಟಿಸುತ್ತಿದ್ದರೆಂಬ ಮಾತುಗಳಿದ್ದವು. ಇಂದಿರಾ ವಿಶ್ವಾಸ ಗಳಿಸಿದ ಅವರಿಗೆ 1971ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರಿಕೆ ಒಲ್ಲದಿದ್ದರೂ ಒಲಿಯಿತು. ಕ್ಷೇತ್ರಕ್ಕೆ ಹೊರಗಿನವರಾದರೂ ನಿಜಲಿಂಗಪ್ಪ ಅವರ ಅಳಿಯ ಎಂ.ವಿ.ರಾಜಶೇಖರನ್ (ಕಾಂಗ್ರೆಸ್-ಎಸ್) ವಿರುದ್ಧ ಇಂದಿರಾ ಗಾಳಿಯಲ್ಲಿ ಗೆದ್ದರು ಕೂಡ.

1979ರಲ್ಲಿ ದೇವರಾಜ ಅರಸು ಅವರು ಇಂದಿರಾ ಅವರನ್ನು ತೊರೆದು ಬೇರೆ ದಾರಿ ಹಿಡಿದಾಗಲೂ ಇಂದಿರಾಗೆ ನಿಷ್ಠರಾಗಿ ಉಳಿದವರು ಷರೀಫ್. 1980ರಲ್ಲಿ ಇಂದಿರಾ ಅಧಿಕಾರಕ್ಕೆ ಮರಳಿದ ನಂತರ ರೈಲ್ವೆ ರಾಜ್ಯ ಮಂತ್ರಿಯಾದರು. ರಾಜೀವ್ ಮಂತ್ರಿಮಂಡಲದಲ್ಲಿ ಕಲ್ಲಿದ್ದಲು ಖಾತೆ ನಿರ್ವಹಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಆದರು. ಕಾಲ ಕಾಲಕ್ಕೆ ಬದಲಾದ ರಾಜಕೀಯ ಸನ್ನಿವೇಶಗಳು ಮತ್ತು ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡದ್ದು ಅವರ ಸುದೀರ್ಘ ರಾಜಕಾರಣದ ರಹಸ್ಯ.

ಕೇಂದ್ರ ಮಂತ್ರಿಯಾಗಿದ್ದ ಅವರ ಉನ್ನತಿಯ ದಿನಗಳಲ್ಲಿ ದೆಹಲಿಯ ಅವರ ಅಕ್ಬರ್ ರಸ್ತೆಯ 17ನೆಯ ನಂಬರಿನ ಅವರ ಸರ್ಕಾರಿ ಬಂಗಲೆಯ ಬಾಗಿಲುಗಳು ಕನ್ನಡಿಗರ ಪಾಲಿಗೆ ಹಗಲಿರುಳೂ ತೆರೆದದ್ದನ್ನು ಹಳಬರು ಈಗಲೂ ನೆನೆಯುತ್ತಾರೆ. ಬಂದವರಿಗೆಲ್ಲ ಅಲ್ಲಿ ಚಹಾದ ಬದಲಿಗೆ ಖೀರನ್ನು ನೀಡಲಾಗುತ್ತಿತ್ತು. ವಿಮಾನಪ್ರಯಾಣ ಗಗನಕುಸುಮ ಆಗಿದ್ದ ಅಂದಿನ ದಿನಗಳಲ್ಲಿ ಫಜೀತಿಯಲ್ಲಿದ್ದ ಕನ್ನಡಿಗರಿಗೆ ರೈಲ್ವೆ ಪಾಸುಗಳು, ಮೀಸಲಿರಿಸಿದ ಟಿಕೆಟುಗಳು ಧಾರಾಳವಾಗಿ ದೊರೆಯುತ್ತಿದ್ದವು.

2000 ಇಸವಿಯ ನಂತರ ಅವರ ರಾಜಕೀಯ ಬದುಕಿನ ಇಳಿಎಣಿಕೆ ಆರಂಭ ಆಗಿತ್ತು. ಅಲ್ಲಿಗೆ ಹೆಚ್ಚು ಕಡಿಮೆ ಅವರು ದೆಹಲಿಯ ಶಿಖರ ರಾಜಕಾರಣದಿಂದ ಕೆಳ ಜಾರಿದ್ದರು. ಭ್ರಷ್ಟಾಚಾರದ ಆಪಾದನೆಗಳನ್ನು ಬಹು ಎಚ್ಚರಿಕೆಯಿಂದ ದಾಟಿದ್ದ ಅವರು ಎಬಿಬಿ ವ್ಯಾಗನ್ ಪ್ರಕರಣದಲ್ಲಿ ಎಡವಿದ್ದರು. ಆದಾಯ ಮೀರಿದ ಆಸ್ತಿಪಾಸ್ತಿ ಗಳಿಕೆಯ ಆರೋಪ ಎದುರಿಸಿದರು.

ದೇಶದ ರಾಜಕಾರಣ ತಮ್ಮನ್ನು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯ ಎರಕದಲ್ಲಿ ಅಚ್ಚು ಮಾಡಲಿಲ್ಲ, ಬದಲಾಗಿ ಮುಖ್ಯವಾಹಿನಿಯ ರಾಜಕಾರಣಿಯಂತೆ ನಡೆಸಿಕೊಂಡಿತು. ಕೇಂದ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಹೊಸ ಮುಸ್ಲಿಂ ಚಹರೆಗಳು ಹೊಮ್ಮುತ್ತಿದ್ದಂತೆ ಅವರು ಹಿನ್ನೆಲೆಗೆ ಸರಿಯಬೇಕಾಗಿ ಬಂದಿತ್ತು. ಮಕ್ಕಳನ್ನು ಕಳೆದುಕೊಂಡ ದುರಂತದ ವೃದ್ಧಾಪ್ಯ ಅವರದಾಗಿತ್ತು. ಮೊಮ್ಮಗನಿಗೆರಾಜಕೀಯ ನೆಲೆ ಕಲ್ಪಿಸುವಲ್ಲಿ ಮತ್ತಷ್ಟು ಹಣ್ಣಾದರು.

***

ಮೊದಲು ಟೀಕೆ ಮತ್ತು ಮೆಚ್ಚುಗೆ
ದೇಶದ ಹಿತದೃಷ್ಟಿಯಿಂದ ಮೋದಿಯವರನ್ನು ತಿರಸ್ಕರಿಸಿ ಎಂದು 2013ರಲ್ಲಿ ಹೇಳಿಕೆ ನೀಡಿದ್ದ ಅವರು 2017ರಲ್ಲಿ ಮೋದಿಯವರನ್ನು ಮೆಚ್ಚಿದ್ದರು. ಅಷ್ಟೇ ಅಲ್ಲ, ರಾಷ್ಟ್ರಪತಿ ಹುದ್ದೆಗೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬೆಂಬಲಿಸಿದ್ದರು.

ಭಾಗವತ್ ಅವರ ದೇಶಭಕ್ತಿ, ಸಂವಿಧಾನ-ಜನತಂತ್ರ ನಿಷ್ಠೆಗಳನ್ನು ಯಾರೂ ಅಲ್ಲಗಳೆಯಲು ಬರುವುದಿಲ್ಲ. ಅವರನ್ನು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸುವ ವಿಷಯದಲ್ಲಿ ಅನಗತ್ಯ ವಿವಾದ ಕೂಡದು. ಮುಸಲ್ಮಾನರು ಈ ಬೆಳವಣಿಗೆ ಕುರಿತು ಭಯ ಅಥವಾ ಅವಿಶ್ವಾಸ ಹೊಂದಬೇಕಿಲ್ಲ ಎಂದು ಮೋದಿಯವರಿಗೆ 2017ರ ಮಾರ್ಚ್ 29ರಂದು ಬರೆದಿದ್ದ ಪತ್ರದಲ್ಲಿ ಹೇಳಿದ್ದರು. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕೆಂಬ ಮೋದಿ ಸಲಹೆಗೆ ಸಂಪೂರ್ಣ ಬೆಂಬಲ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT