ಬೆಂಗಳೂರು: ‘ಅಂಜನಾದ್ರಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಹಿಂದುತ್ವದ ಆಧಾರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸಿತ್ತು. ಈಗ ನಿಮಗೆ ಅವಕಾಶ ಬಂದಿದೆ. ಅದನ್ನು ಬಳಸಿಕೊಂಡು ಅಭಿವೃದ್ಧಿ ಮಾಡಿ, ಬಿಜೆಪಿಗೆ ಮತ್ತೆ ಅವಕಾಶ ಕೊಡಬಾರದು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಾಲಿ ಜನಾರ್ದನ ರಡ್ಡಿ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಿಮ್ಮ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ನಾವು ಸೇರಿ ಅಭಿವೃದ್ಧಿ ಮಾಡಿದರೆ ಬಿಜೆಪಿಯವರಿಗೆ ಅವಕಾಶ ಸಿಗುವುದಿಲ್ಲ. ಈ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದರು.
‘ಬಿಜೆಪಿಗೆ 4 ವರ್ಷ ಅಧಿಕಾರವಿತ್ತು. ಕೇಂದ್ರದಲ್ಲೂ 9 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅಯೋಧ್ಯೆ ರೀತಿ ಅಭಿವೃದ್ಧಿ ಮಾಡಬಹುದಿತ್ತು. ಬೊಮ್ಮಾಯಿ ಸರ್ಕಾರ ಕೊನೆ ಕ್ಷಣದಲ್ಲಿ ₹120 ಕೋಟಿ ಮೀಸಲಿಟ್ಟಿದ್ದೇವೆಂದು ಘೋಷಿಸಿದರು. ಆದರೆ ಒಂದು ನಯಾಪೈಸೆ ಬಿಡುಗಡೆ ಮಾಡಲಿಲ್ಲ’ ಎಂದರು.
‘ಇದರ ಅಭಿವೃದ್ಧಿಗೆ ನನ್ನದೇ ಆದ ಆಲೋಚನೆಯಲ್ಲಿ ಸಮಗ್ರ ಯೋಜನಾ ವರದಿ ಮಾಡಿಸಿಕೊಡುತ್ತೇನೆ. ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿ’ ಎಂದರು.