ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಮೂರ್ತಿ ಹೇಳಿಕೆ ಸಾಮಾಜಿಕ ನ್ಯಾಯ, ಬಡತನ ನಿರ್ಮೂಲನೆಗೆ ವಿರುದ್ಧ: ಮಹದೇವಪ್ಪ

Published 1 ಡಿಸೆಂಬರ್ 2023, 11:17 IST
Last Updated 1 ಡಿಸೆಂಬರ್ 2023, 11:17 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಇನ್ಫೊಸಿಸ್‌ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಆಕ್ಷೇಪ ವ್ಯಕ್ತಪಡಿಸಿರುವುದು, ಸಾಮಾಜಿಕ ನ್ಯಾಯ, ಸಮಾನತೆ, ಬಡತನ ನಿರ್ಮೂಲನೆಗೆ ವಿರುದ್ಧವಾದುದು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿರುಗೇಟು ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಸರ್ಕಾರದಿಂದ ಜನರಿಗೆ ಯಾವುದನ್ನೂ ಉಚಿತವಾಗಿ ನೀಡಬಾರದು ಎಂಬ ಮನೋಪ್ರವೃತ್ತಿಯೇ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವುದು ಸಂವಿಧಾನದ ಮೂಲ ಉದ್ದೇಶ. ಸಮ ಸಮಾಜದ ನಿರ್ಮಣವೇ ಅದರ ಪ್ರಮುಖ ಆದ್ಯತೆ’ ಎಂದು ಹೇಳಿದರು.

‘ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಕೆಲವೇ ಕೈಗಾರಿಕೋದ್ಯಮಗಳ ಸಾಲವನ್ನು ಮನ್ನಾ ಮಾಡಿದ ಸಂದರ್ಭದಲ್ಲಿ ನಾರಾಯಣ ಮೂರ್ತಿ ಅವರು ಈ ಹೇಳಿಕೆ ನೀಡಬೇಕಿತ್ತು. ಸಾಲ ಮನ್ನಾ ಹಣವನ್ನು ದೇಶದ ಅಭಿವೃದ್ಧಿಗೆ ಹಾಗೂ ವ್ಯವಸಾಯಕ್ಕೆ ಬಳಸಿ, ದೇಶದ ಬಡತನ ನಿವಾರಣೆಗೊಳಿಸಿ ಸಮ ಸಮಾಜ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದ್ದರೆ ಶ್ಲಾಘಿಸಿ ಅವರು ದೇಶದ ಸಂವಿಧಾನದ ಆಶಯಕ್ಕೆ ಅನುಗುಣವಾಗಿದ್ದಾರೆ ಎನ್ನಬಹುದಿತ್ತು. ಆದರೆ, ಬಡವರ ಏಳಿಗೆಯ ಪರವಾಗಿರುವ ಸೌಲಭ್ಯಗಳನ್ನು ಅಣುಕಿಸಬಾರದು’ ಎಂದು ತಿಳಿಸಿದರು.

‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ 1.32 ಲಕ್ಷ ಕುಟುಂಬಗಳು ಸ್ವಾವಲಂಬಿ ಜೀವನದ ಕಡೆಗೆ ಹೆಜ್ಜೆ ಹಾಕುತ್ತಿವೆ’ ಎಂದು ಸಮರ್ಥಿಸಿಕೊಂಡರು.

‘ದೇಶದ ಎಲ್ಲರಿಗೂ ಸಂಪನ್ಮೂಲವನ್ನು ಹಂಚಬೇಕು ಎಂದು ನಮ್ಮ ಸಂವಿಧಾನ ಹೇಳಿದೆ. ಯಾರೋ ನಾಲ್ಕು ಜನರು ಸಂಪನ್ಮೂಲ ಕೂಡಿಟ್ಟುಕೊಂಡರೆ ಉಳಿದವರೇನು ಮಾಡಬೇಕು? ಗ್ರಾಮೀಣ ಭಾಗದ ಜನರು ಹಾಗೂ ಶತಮಾನಗಳಿಂದ ತುಳಿತಕ್ಕೊಳಗಾದವರ ಗತಿ ಏನು? ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸ್ಥಿತಿ ಏನಾಗಬೇಕು? ಆದ್ದರಿಂದ, ಯಾರೋ ಒಬ್ಬರು ವಿರೋಧಿಸಿದ್ದಾರೆ ಎಂದು ಸಂವಿಧಾನದ ಆಶಯಗಳನ್ನು ಕಡೆಗಣಿಸಲಾಗದು’ ಎಂದು ಪ್ರತಿಪಾದಿಸಿದರು.

‘ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಜನಾದೇಶ ಬರಲಿದೆ. ಬಿಜೆಪಿ ಆಡಳಿತದಲ್ಲಿ ಬರೀ ಪೊಳ್ಳು ಮಾತು, ಸುಳ್ಳು ಭರವಸೆಗಳ ವ್ಯಾಪಕ ಪ್ರಚಾರ ಬಿಟ್ಟರೆ ತಳಹಂತದಲ್ಲಿ ಏನೂ ಬದಲಾವಣೆ ಆಗಿಲ್ಲ. ಅವರು ಸಾರ್ವಜನಿಕ ಆಸ್ತಿಗಳನ್ನು ಮಾರಿದರು. ನೋಟು ಚಲಾವಣೆ ರದ್ದುಪಡಿಸಿದರು. ಭಾವನಾತ್ಮಕ ವಿಷಯಗಳನ್ನು ಮುಂದೆ ತಂದರು. ಇವುಗಳಿಂದ ದಲಿತರ ಮೇಲಿನ ದೌರ್ಜನ್ಯವೇನು ಕಡಿಮೆಯಾಗಿಲ್ಲ. ಜನರು ಇದೆನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ’ ಎಂದು ಹೇಳಿದರು.

‘ಜನರಿಗೆ ಬೇಕಿರುವುದು ಬಡತನ ನಿವಾರಣೆ ಹಾಗೂ ಹಸಿವು ನೀಗಿಸುವುದು. ಎಲ್ಲರಿಗೂ ಗೌರವಯುತವಾಗಿ ಜೀವನ ಕಲ್ಪಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು. ಆದರೆ, ಬಿಜೆಪಿ ಆಡಳಿತದಲ್ಲಿ ಇದ್ಯಾವುದೂ ಸಾಧ್ಯವಾಗಲಿಲ್ಲ. ಅವರ ಆಡಳಿತ ವೈಫಲ್ಯವನ್ನು ಕಂಡು ಜನರು ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪರವಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT