ಬೆಂಗಳೂರು: ವಿವಿಧ ನಿಗಮ, ಮಂಡಳಿಗಳ ನೇಮಕಾತಿಗೆ ಅ.28 ಹಾಗೂ 29ರಂದು ನಡೆಯುವ ಪರೀಕ್ಷೆಗೆ ಹಿಜಾಬ್ ಧರಿಸಿದವರು ಒಂದು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.
ಶಾಲೆ-ಕಾಲೇಜುಗಳ ಒಳಗೆ ಹಿಜಾಬ್ ಧರಿಸುವುದನ್ನು ಹಿಂದಿನ ಬಿಜೆಪಿ ಸರ್ಕಾರ ನಿಷೇಧಿಸಿತ್ತು. ಈಗ ಪರೀಕ್ಷೆಗೆ ಹಿಜಾಬ್ ಧರಿಸಿ ಬರಲು ಪ್ರಾಧಿಕಾರ ಅವಕಾಶ ನೀಡಿದ್ದರೂ, ತಪಾಸಣೆಗಾಗಿ ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಬರಬೇಕು ಎನ್ನುವ ಷರತ್ತು ವಿಧಿಸಿದೆ.
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್, ಬಟನ್ಗಳನ್ನು ಹೊಂದಿರುವ ಬಟ್ಟೆ, ಪೂರ್ಣ ತೋಳಿನ ವಸ್ತ್ರ, ಜಿನ್ಸ್ ಪ್ಯಾಂಟ್, ಲೋಹದ ಆಭರಣ ಧರಿಸುವುದನ್ನು, ಪುರುಷರು ಕಿವಿಯೋಲೆ, ಉಂಗುರ, ಕಡಗ, ಕುರ್ತಾ, ಪೈಜಾಮ, ಜಿನ್ಸ್ ಧರಿಸುವುದನ್ನು ನಿಷೇಧಿಸಿದೆ.
ತಲೆಮೇಲೆ ಟೋಪಿ, ಬಾಯಿ, ಕಿವಿ ಮತ್ತು ತಲೆ ಮುಚ್ಚುವ ವಸ್ತ್ರ ಧರಿಸುವಂತಿಲ್ಲ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಪೆನ್ಸಿಲ್, ಕಾಗದದ ಹಾಳೆಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪ್ರವೇಶ ಪತ್ರ, ಭಾವಚಿತ್ರ, ಪಾರದರ್ಶಕ ಕುಡಿಯುವ ನೀರಿನ ಬಾಟಲ್ ತೆಗೆದುಕೊಂಡು ಹೋಗಲು ಅನುಮತಿಸಿದೆ.