ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸಿದ್ದರಾಮಯ್ಯನವರ ಆಡಳಿತ ಸ್ವಪಕ್ಷೀಯರಿಗೆ ತೃಪ್ತಿ ತಂದಿಲ್ಲ: ಬಿಜೆಪಿ ವ್ಯಂಗ್ಯ

Published 1 ಅಕ್ಟೋಬರ್ 2023, 12:53 IST
Last Updated 1 ಅಕ್ಟೋಬರ್ 2023, 12:53 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕನ್ನಡಿಗರು ನೆಮ್ಮದಿಯಾಗಿಲ್ಲ ಎಂಬುದು ಎಷ್ಟು ಸತ್ಯವೋ, ಹಾಗೆಯೇ ಸ್ವಪಕ್ಷೀಯರಿಗೂ ಅವರ ಆಡಳಿತ ತೃಪ್ತಿ ತಂದಿಲ್ಲ ಎಂಬುದು ಅಷ್ಟೇ ಸತ್ಯ ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ ಅವರು, ತಮ್ಮದು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೇಳಿದ್ದು ಸಂಪೂರ್ಣ ಸುಳ್ಳು ಎಂಬುದು ಅವರ ನಾಲ್ಕು ತಿಂಗಳ ಆಡಳಿತದಲ್ಲಿ ಸಾಬೀತಾಗಿದೆ. ಜಾತಿ ರಾಜಕಾರಣವನ್ನೇ ಅಸ್ತ್ರ ಮಾಡಿಕೊಂಡಿರುವ ಅವರು ಕೆಲವೇ ಆಯ್ದ ಜನಾಂಗಕ್ಕೆ ಅನುಕೂಲ ಮಾಡಿ ಉಳಿದವರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂಬುದು ಅವರ ಸ್ವಪಕ್ಷೀಯರೇ ನುಡಿದಿರುವ ಸತ್ಯವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಚುನಾವಣಾ ಪೂರ್ವದಲ್ಲಿ ಅಹಿಂದ ಎಂಬ ದಾಳ ಉರುಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಸಿದ್ದರಾಮಯ್ಯನವರು ಚುನಾವಣೆಯ ನಂತರ ಹಿಂದುಳಿದವರನ್ನು ಬಿಟ್ಟು, ತಾವು ಮತ್ತು ತಮ್ಮವರನ್ನು ಮಾತ್ರ ಮುಂದಕ್ಕೆ ಒಯ್ಯುತ್ತಾರೆ’ ಎಂದು ಬಿ.ಕೆ ಹರಿಪ್ರಸಾದ್‌ ಅವರು ತುಂಬಿದ ಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿ ಸಿದ್ದರಾಮಯ್ಯನವರ ಒಳಗುಣವನ್ನು ಹೊರಹಾಕಿದ್ದಾರೆ ಎಂದು ಬಿಜೆಪಿ ಹೇಳಿದೆ.

ಸಿದ್ದರಾಮಯ್ಯನವರ ಅಸಮಾಧಾನ ಹಿಂದುಳಿದ ವರ್ಗಗಳ ನಾಯಕರ ಮೇಲೆ ಮಾತ್ರವಲ್ಲ, ರಾಜ್ಯದ ಹಿಂದುಳಿದ ವರ್ಗಗಳ ಮೇಲೆಯೂ ಅವರ ಅಸಮಾಧಾನ ಜೋರಾಗಿದೆ. ಹಿಂದುಳಿದ ವರ್ಗಗಳನ್ನು ಬಜೆಟ್‌ನಲ್ಲಿ ಕಡೆಗಣಿಸಲು ಇದೇ ಕಾರಣ. ರಾಜ್ಯದ ಪ್ರಮುಖ ಹಿಂದುಳಿದ ಸಮುದಾಯಗಳಾದ ತಿಗಳ, ಮಡಿವಾಳ, ಉಪ್ಪಾರ, ಬಲಿಜ ಸೇರಿದಂತೆ ಇತರ ಸಮುದಾಯಗಳಿಗೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಿಗಮಗಳ ಭಾಗ್ಯವಿಲ್ಲ, ಇನ್ನೂ ಅತಿ ಸಣ್ಣ ಹಿಂದುಳಿದ ವರ್ಗಗಳಿಗೆ ಅಭಿವೃದ್ಧಿ ನಿಗಮವೂ ಇಲ್ಲ, ಅನುದಾನವೂ ಇಲ್ಲ. ಇದು ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗೆ ನೀಡಿದ ಮಹಾನ್‌ ಕೊಡುಗೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಮತ್ತೊಬ್ಬರನ್ನು ರಾಜಕೀಯವಾಗಿ ತುಳಿಯುವ ಗುಣವಿರುವ ಸಿದ್ದರಾಮಯ್ಯನವರು 2013ರಲ್ಲಿ ಕೊರಟಗೆರೆಯಲ್ಲಿ ಡಾ. ಜಿ.ಪರಮೇಶ್ವರ ಅವರು ಸೋಲುವಂತೆ ನೋಡಿಕೊಂಡಿದ್ದೂ ಅಲ್ಲದೆ, ಇದೀಗ ಅವರ ಗೃಹ ಇಲಾಖೆಗೆ ಉಳಿದವರು ಹಸ್ತಕ್ಷೇಪ ಮಾಡಲು ಕುಮ್ಮಕ್ಕು ನೀಡಿ ಉದ್ದೇಶಪೂರ್ವಕವಾಗಿ ಪರಮೇಶ್ವರ ಅವರನ್ನು ಡಮ್ಮಿ ಮಂತ್ರಿ ಮಾಡಿ ಕೂರಿಸಿದ್ದಾರೆ ಎಂದು ಟೀಕಿಸಿದೆ.

ವಿಪಕ್ಷ ಸ್ಥಾನದ ಹುದ್ದೆಗೆ ಅಡ್ಡಗಾಲಾಗಿದ್ದರು ಎಂಬ ಏಕೈಕ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆಗೆ ಕಳುಹಿಸಿದ ಸ್ವಾರ್ಥಿ ಸಿದ್ದರಾಮಯ್ಯ ಎಂದು ಬಿಜೆಪಿ ಹೇಳಿದೆ.

ವೀರಶೈವ–ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ನಿಷ್ಠುರ ಸತ್ಯವನ್ನು ಕಾಂಗ್ರೆಸ್‌ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರು ದೂರಿದ್ದಾರೆ. ವೀರಶೈವ–ಲಿಂಗಾಯತ ಸಮುದಾಯದವರಿಗೆ ಸಿಎಂ ಕುರ್ಚಿ ನೀಡಿ ಎನ್ನುವ ಮೂಲಕ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ತಮಗೆ ನಂಬಿಕೆ ಹಾಗೂ ವಿಶ್ವಾಸವಿಲ್ಲ ಎಂಬ ಸತ್ಯವನ್ನು ಪುನರುಚ್ಚರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಜೆಪಿ ಪೋಸ್ಟ್‌ ಮಾಡಿದೆ.

ಒಟ್ಟಿನಲ್ಲಿ ಸಿದ್ದರಾಮಯ್ಯನವರ ನಾಯಕತ್ವ ಮತ್ತವರ ತುಷ್ಟೀಕರಣದ ರಾಜಕಾರಣ ಹಾಗೂ ಸ್ವಜನಪಕ್ಷಪಾತದಿಂದ ಸ್ವಪಕ್ಷೀಯರೇ ರೋಸಿ ಹೋಗಿರುವುದು ಅವರ ಹೇಳಿಕೆಗಳಿಂದಲೇ ಸಾಬೀತಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT