ಬೆಂಗಳೂರು: 2006, 2008 ಮತ್ತು 2010ನೇ ಸಾಲಿನ ಒಟ್ಟು 23 ಕೆಎಎಸ್ ಅಧಿಕಾರಿಗಳಿಗೆ ‘ಐಎಎಸ್’ ಶ್ರೇಣಿಗೆ ಬಡ್ತಿ ನೀಡಲಾಗಿದೆ. 2016ರ ಸಾಲಿನಲ್ಲಿ 10, 2017ರಲ್ಲಿ ಇಬ್ಬರು, 2018ರಲ್ಲಿ ಮೂವರು, 2019ರಲ್ಲಿ 8 ಅಧಿಕಾರಿಗಳು ಪದೋನ್ನತಿ ಹೊಂದಿದ್ದಾರೆ.
ಜ್ಯೇಷ್ಠತೆ ಆಧಾರದಲ್ಲಿ ಐಎಎಸ್ (ಕರ್ನಾಟಕ ಕೇಡರ್) ಶ್ರೇಣಿಗೆ ಪದೋನ್ನತಿ ನೀಡಲು ಯುಪಿಎಸ್ಸಿ (ಕೇಂದ್ರ ಲೋಕಸೇವಾ ಆಯೋಗ) 2020ರ ಡಿ. 29ರಂದು ಆಯ್ಕೆ ಸಮಿತಿ ಸಭೆ (ಎಸ್ಸಿಎಂ) ನಡೆಸಿತ್ತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಡ್ತಿ ಪಡೆದ ಅಧಿಕಾರಿಗಳ ಹೆಸರುಗಳನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಪ್ರಕಾರ, 2016ರ ಸಾಲಿನಲ್ಲಿ 12, 2017ರಲ್ಲಿ ಇಬ್ಬರು, 2018ರಲ್ಲಿ ಮೂವರು, 2019ರಲ್ಲಿ 9 ಹೀಗೆ ಒಟ್ಟು 26 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದೋನ್ನತಿ ಹೊಂದಲು ಅವಕಾಶ ಇತ್ತು. ಆದರೆ, ಅಧಿಕಾರಿಗಳ ಸೇವಾ ಜ್ಯೇಷ್ಠತೆ ಮತ್ತು ರಹಸ್ಯ ವರದಿಯ ಸೂಕ್ಷ್ಮ ಪರಿಶೀಲನೆಯ ಬಳಿಕ ಮೂವರ ಹೆಸರನ್ನು ಕೈ ಬಿಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೂಲಗಳು ತಿಳಿಸಿವೆ.