ಬೆಂಗಳೂರು: ಕೇರಳ ಹಾಗೂ ಕೊಡಗಿನ ಸಂತ್ರಸ್ತರಿಗೆ ಆರ್ಥಿಕ ನೆರವು ಒದಗಿಸುವ ನೆಪದಲ್ಲಿ ಹಲವರು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಆ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಫೇಸ್ಬುಕ್ ಹಾಗೂ ಟ್ವಿಟರ್ಗಳಲ್ಲಿ ಪೋಸ್ಟ್ ಪ್ರಕಟಿಸಿರುವ ನಗರದ ಪೊಲೀಸರು, ‘ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬ್ಯಾಂಕ್ ಖಾತೆಗಳ ವಿವರಗಳು ಹರಿದಾಡುತ್ತಿವೆ. ನೆರವು ನೀಡುವ ಮುನ್ನ ಸಾರ್ವಜನಿಕರು, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವುದು ಸೂಕ್ತ’ ಎಂದು ಹೇಳಿದ್ದಾರೆ.
‘ಜನರ ನೆರವನ್ನೇ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆನ್ಲೈನ್ ಖದೀಮರು, ನಕಲಿ ಖಾತೆ ತೆರೆದು ಹಣ ದೋಚಲು ಮುಂದಾಗುತ್ತಿದ್ದಾರೆ. ಅಂಥವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ’ ಎಂದು ಹೇಳಿದ್ದಾರೆ.