ಬೆಂಗಳೂರು: ‘ಪಕ್ಷದ ರಾಜ್ಯಮಟ್ಟದ ಸಮಿತಿ ಅಥವಾ ಬ್ಲಾಕ್ಮಟ್ಟದ ಸಮಿತಿಯಲ್ಲಿ ಪದಾಧಿಕಾರಿಗಳ ಬದಲಾವಣೆ ಮಾಡುವ ಯಾವುದೇ ಪ್ರಸ್ತಾವ ಸದ್ಯಕ್ಕೆ ಇಲ್ಲ. ಈ ಬಗ್ಗೆ ಯಾರಾದರು ಹೇಳಿಕೆಗಳನ್ನು ನೀಡಿದರೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ವಿಚಾರವನ್ನು ಪ್ರಚಾರ ಮಾಡಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ವಿಡಿಯೊ ಮೂಲಕ ಈ ವಿಷಯ ತಿಳಿಸಿರುವ ಅವರು, ‘ಮೊದಲು ಪಕ್ಷದಲ್ಲಿ ಒಗ್ಗಟ್ಟು ಮೂಡಿಸಬೇಕು. ಬೂತ್ಮಟ್ಟದ ಸಮಿತಿ ಮಾಡಬೇಕಾಗಿದೆ’ ಎಂದಿದ್ದಾರೆ.
‘ಯಾರೂ ಕೂಡಾ ಗೊಂದಲದ ಮಾಡುವುದು ಬೇಡ. ಈಗ ಇರುವ ರಾಜ್ಯ ಮಟ್ಟದ, ಬ್ಲಾಕ್ ಮಟ್ಟ ಸಮಿತಿ ಕೂಡಾ ಚುನಾವಣೆಯಲ್ಲಿ ಆಯ್ಕೆ ಆಗಿರುವಂಥದ್ದು. ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಇಲ್ಲದೆ ಅಥವಾ ಅವರ ಗಮನಕ್ಕೆ ತಾರದೆ ಪದಾಧಿಕಾರಿಗಳ ಬದಲಾವಣೆ ಮಾಡುವ ಆಲೋಚನೆ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
‘ಸದ್ಯ ನಾವೆಲ್ಲರೂ ಕೋವಿಡ್ ವಿಚಾರದಲ್ಲಿ ಜನರಿಗೆ ಸಹಕಾರ ನೀಡುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಪಕ್ಷದ ಕಾರ್ಯಕರ್ತರು ಸ್ಥಳೀಯವಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದೂ ಶಿವಕುಮಾರ್ ಮನವಿ ಮಾಡಿದ್ದಾರೆ.