ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ದಾರಿ ತಪ್ಪಿಸುತ್ತಿರುವ ಕಾಣದ ಕೈಗಳು: ಅಶೋಕ

Published 5 ಜನವರಿ 2024, 23:50 IST
Last Updated 5 ಜನವರಿ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯವರಿಗೆ ಒಂದೋ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈತಪ್ಪಿದೆ ಅಥವಾ ಕಾಣದ ಕೈಗಳು ದಿಕ್ಕು ತಪ್ಪಿಸುತ್ತಿವೆ. ಇಲ್ಲವೆಂದರೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲೆಂದೇ ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡುವ ಅಗತ್ಯವೇನಿತ್ತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

‘ನಾನೂ ಕರಸೇವಕ ನನ್ನನ್ನೂ ಬಂಧಿಸಿ’ ಎಂಬ ಘೋಷವಾಕ್ಯದಡಿ ಬಿಜೆಪಿ ಆರಂಭಿಸಿರುವ ಅಭಿಯಾನ ಶುಕ್ರವಾರವೂ ಮುಂದುವರಿಯಿತು. ಆರ್. ಅಶೋಕ, ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್, ಶಾಸಕ ಎಸ್. ಸುರೇಶ್‌ ಕುಮಾರ್, ಮಾಜಿ ಸಚಿವ ರಾಮಚಂದ್ರಗೌಡ ಬೆಂಗಳೂರಿನಲ್ಲಿ ನಡೆದ ಅಭಿಯಾನದಲ್ಲಿ ಫಲಕ ಹಿಡಿದು ಪ್ರತಿಭಟನೆ ತೋರಿಸಿದರು.

ಈ ವೇಳೆ ಮಾತನಾಡಿದ ಅಶೋಕ, ಮೇಲ್ಕಂಡ ಎರಡರಲ್ಲಿ ಯಾವುದು ಸತ್ಯವಾದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಹೊಂದಿಲ್ಲ. ಆದ್ದರಿಂದ ತಮ್ಮ ತಪ್ಪನ್ನು ಒಪ್ಪಿಕೊಂಡು ಶ್ರೀಕಾಂತ್‌ ಪೂಜಾರಿ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ಬಂಧಿತ ಶ್ರೀಕಾಂತ ಪೂಜಾರಿ ಅವರ ಮೇಲೆ ಇದ್ದ 16 ಪ್ರಕರಣಗಳಲ್ಲಿ 15 ಪ್ರಕರಣಗಳು ಈಗಾಗಲೇ ತಾರ್ಕಿಕ ಅಂತ್ಯ ಕಂಡಿದ್ದು, ಬಾಕಿ ಇರುವ ಒಂದು ಪ್ರಕರಣ 1992 ರಲ್ಲಿ ಅವರು ನಾಪತ್ತೆ ಆಗಿದ್ದರು ಎಂಬ ಕಾರಣಕ್ಕೆ ದಾಖಲಾಗಿತ್ತು. ಆದರೆ, ಸಿದ್ದರಾಮಯ್ಯ 16 ಪ್ರಕರಣಗಳೂ ಬಾಕಿ ಇದೆ ಎಂದು ಹಸಿ ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳಿರುವ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸದಾ ಸುಳ್ಳು ಹೇಳುವ ಸಿದ್ಧರಾಮಯ್ಯ ಅವರನ್ನು ಆ ಪ್ರಭು ಶ್ರೀರಾಮ ಕೂಡ ಕ್ಷಮಿಸುವುದಿಲ್ಲ. ಹುಬ್ಬಳ್ಳಿ ಮಾತ್ರವಲ್ಲದೇ ಚಿಕ್ಕಮಗಳೂರು, ಕಲಬುರ್ಗಿ ಮೊದಲಾದ ಕಡೆಗಳಲ್ಲಿ ಹೀಗೆಯೇ ಆಗುತ್ತಿದೆ. ರಾಜ್ಯದಲ್ಲಿ ಸರ್ಕಾರ ತುರ್ತುಪರಿಸ್ಥಿತಿಯನ್ನು ಹೇರಿದೆ ಎಂದು ದೂರಿದರು.

‘ರಾಮಭಕ್ತರ ಉತ್ಸಾಹ, ಮೆರವಣಿಗೆ, ಮಂತ್ರಾಕ್ಷತೆ ವಿತರಣೆ ಮೊದಲಾದವು ಕಾಂಗ್ರೆಸ್ ನಾಯಕರ ತಲೆ ಕೆಡುವಂತೆ ಮಾಡಿದೆ. ಹೀಗಾಗಿ ಕರಸೇವಕರನ್ನು ಬಂಧಿಸಲಾಗುತ್ತದೆ. ನಾವೆಲ್ಲರೂ ಕರಸೇವಕರಾಗಿದ್ದು, ತಾಕತ್ತಿದ್ದರೆ ಸರ್ಕಾರ ನಮ್ಮನ್ನು ಬಂಧಿಸಲಿ. ರಾಜ್ಯದಲ್ಲಿ ಎಲ್ಲ ಜೈಲುಗಳನ್ನು ತೆರೆದು ನಮ್ಮೆಲ್ಲರನ್ನು ಕಳುಹಿಸಲಿ. ರಾಮಭಕ್ತರನ್ನು ತಡೆಯುವ ಶಕ್ತಿ ಇದೆಯೇ ಎಂಬುದನ್ನು ಸರ್ಕಾರ ತೋರಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT