ಕಲಬುರಗಿ: ‘ಕಬ್ಬಿನ ತೂಕದಲ್ಲಿ ಮೋಸ ಮಾಡಿದ್ದು ಕಂಡುಬಂದಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಯ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಜವಳಿ ಮತ್ತು ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಎಸ್.ಪಾಟೀಲ ಎಚ್ಚರಿಕೆ ನೀಡಿದರು.
ಇಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಎಪಿಎಂಸಿಯಲ್ಲಿ ಮುಕ್ತವಾಗಿ ತೂಕ ಮಾಡಿಕೊಂಡು ರಸೀದಿ ಪಡೆಯಬೇಕು. ಅದೇ ಕಬ್ಬನ್ನು ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ತೂಕ ಮಾಡಿಸಬೇಕು. ತೂಕದಲ್ಲಿ ಏನಾದರು ವ್ಯತ್ಯಾಸ ಕಂಡುಬಂದಲ್ಲಿ ಲಿಖಿತ ದೂರು ನೀಡಿದರೆ ಆ ಕಾರ್ಖಾನೆಯ ಕಬ್ಬು ನುರಿಸುವಿಕೆಯನ್ನು ರದ್ದು ಮಾಡುತ್ತೇವೆ. ಆದರೆ, ಬಹುತೇಕ ರೈತರು ಲಿಖಿತ ದೂರು ಕೊಡಲು ಮುಂದೆ ಬರುತ್ತಿಲ್ಲ’ ಎಂದರು.
‘ಎಪಿಎಂಸಿಗಳಲ್ಲಿನ ಪ್ರತಿ ₹ 100 ವಹಿವಾಟಿಗೆ 60 ಪೈಸೆ ಸೆಸ್ ದುರ್ಬಳಕೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸ್ಥಳೀಯ ಏಜೆಂಟರ್ಗಳೇ ಇದರಲ್ಲಿ ಭಾಗಿಯಾದ ಆರೋಪಗಳಿವೆ. ವಿಚಕ್ಷಣ ದಳ ರಚನೆ ಮಾಡಿ, ಸೆಸ್ ದುರ್ಬಳಕೆ ನಿಯಂತ್ರಿಸಲಾಗುವುದು. ಹೊಸ ಕಾಯ್ದೆ ಬಂದ ಬಳಿಕ ಎಪಿಎಂಸಿಯ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.