ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಸೋಲಿಸಿ ಕಳಿಸಿದರೂ ಮತ್ತೆ ಜಿಲ್ಲೆ ಮೇಲೆ ಹಿಡಿತ ಸಾಧಿಸಲು ಸಚಿವ ಕೆ.ಎಚ್. ಮುನಿಯಪ್ಪ ಹವಣಿಸುತ್ತಿರುವುದಕ್ಕೆ ಮಾಜಿ ಸಚಿವ ಕೆ.ಆರ್. ರಮೇಶ್ಕುಮಾರ್ (ಸ್ವಾಮಿ–ಸ್ವಾಮೊಳ್ಳು) ನೇತೃತ್ವದ ಬಣ ತಿರುಗಿಬಿದ್ದಿದೆ. ಮುನಿಯಪ್ಪ ಕಾಟ ತಪ್ಪಿತು ಎಂದುಕೊಳ್ಳುತ್ತಿರುವಾಗಲೇ ಅಳಿಯ ಚಿಕ್ಕಪೆದ್ದಣ್ಣನ ಮೂಲಕ, ಮತ್ತೆ ಇಣುಕಲು ಹೊರಟಿರುವುದಕ್ಕೆ ‘ಸ್ವಾಮಿ’ಯವರ ಬಣ ಸೆಟೆದು ನಿಂತಿದೆಯಂತೆ. ಏಳು ಬಾರಿ ಕೋಲಾರದಲ್ಲಿ ಗೆದ್ದ ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದವರಿಗಿಂತ ಅನ್ಯರ ಬೆಂಬಲವನ್ನೇ ನೆಚ್ಚಿಕೊಂಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ–ಸೋತ ಎದುರಾಳಿ ಪಕ್ಷದವರ ಜತೆ ಕೂಡಿಕೆ ಮಾಡಿಕೊಂಡು, ತಮ್ಮ ಕ್ಷೇತ್ರ ಭದ್ರ ಪಡಿಸಿಕೊಳ್ಳುತ್ತಿದ್ದರು. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ನಲ್ಲಿ ತಮಗೆ ಆಗದವರಿಗೆ ಟಿಕೆಟ್ ತಪ್ಪಿಸುವುದು, ಅದು ಸಾಧ್ಯವಾಗದೇ ಇದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ತಮಗೆ ನೆರವಾದವರಿಗೆ ಸಹಾಯ ಮಾಡಿ, ತಮ್ಮ ಪಕ್ಷದವರನ್ನೇ ಸೋಲಿಸುವುದು ಮುನಿಯಪ್ಪ ಅವರ ರಾಜಕಾರಣ ಎಂಬುದು ಕೋಲಾರದಲ್ಲಿ ರಹಸ್ಯವಾಗಿರುವ ‘ಚಿನ್ನ’ದಂಥ ಮಾತು.