ಹುಬ್ಬಳ್ಳಿ: ‘ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಕರ್ನಾಟಕವು ಕೇರಳ ಮಾದರಿ ಅನುಸರಿಸುತ್ತಿದ್ದು, ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
‘ಕೊಲೆಗಡುಕರಿಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಸಹಕರಿಸುತ್ತಿದೆ. ಹಿಂದೂ ಯುವತಿಯರಿಗೆ ಭಯಗ್ರಸ್ಥ ವಾತಾವರಣ ನಿರ್ಮಾಣವಾಗಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೊಲೆಗಡುಕರ ಬಂಧನಕ್ಕೆ ರಾಜ್ಯ ಸರ್ಕಾರ ನೂರು ಸಲ ಯೋಚಿಸುತ್ತದೆ. ಲವ್ ಜಿಹಾದ್ನಲ್ಲಿ ತಪ್ಪಿತಸ್ಥರನ್ನು ಒಳಗೆ ಹಾಕಬೇಕೆಂದರೆ ಅಲ್ಪಸಂಖ್ಯಾತರಿಗೆ ನೋವು ಆಗುವುದೆಂದು ಭಾವಿಸುತ್ತದೆ’ ಎಂದರು.
ಬಿಜೆಪಿ ನಾಯಕ ಸಿ.ಟಿ.ರವಿ ಮಾತನಾಡಿ, ‘ರಾಜ್ಯದಲ್ಲಿ ಲವ್ ಜಿಹಾದ್ ವ್ಯವಸ್ಥಿತ, ಯೋಜನಾಬದ್ಧವಾಗಿ ನಡೆದಿದೆ. ಇದರ ಜಾಡು ಪತ್ತೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಎಸ್ಐಟಿ ರಚಿಸಿ, ತನಿಖೆ ನಡೆಸಬೇಕು’ ಎಂದರು.
‘ಔರಂಗಜೇಬನ ಕಾಲದಲ್ಲಿ ಪ್ರಾಣ ಬೆದರಿಕೆಯೊಡ್ಡಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿತ್ತು. ಈಗ ಪ್ರೀತಿ ನೆಪದಲ್ಲಿ ಮಾಡಲಾಗುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ (ಭೂ ಕಬಳಿಕೆ) ಹಾಗೂ ವೋಟ್ ಜಿಹಾದ್ ಮಾಡಲಾಗುತ್ತಿದೆ. ಇದೆಲ್ಲವನ್ನೂ ಒಳಗೊಂಡಂತೆ ಸಮಗ್ರ ತನಿಖೆಯಾಗಬೇಕು’ ಎಂದು ಅವರು ಆಗ್ರಹಿಸಿದರು