ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ನಾಯಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

Last Updated 16 ಅಕ್ಟೋಬರ್ 2022, 9:50 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಪಕ್ಷದ ನಾಯಕರ ಸಲಹೆ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ರಾಜ್ಯ ನಾಯಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಚುನಾವಣೆಯಿಂದ ಗಾಂಧಿ ಕುಟುಂಬ ಹಿಂದೆ ಸರಿದು, ಬೇರೆಯವರಿಗೆ ಅವಕಾಶ ಕೊಟ್ಟ ಕಾರಣ ಸ್ಪರ್ಧಿಸಲು ನಿರ್ಧರಿಸಿದೆ. ಕಳೆದ 55 ವರ್ಷಗಳಿಂದ ನೀವು ಪಕ್ಷವನ್ನು ಸಂಘಟಿಸುತ್ತಿದ್ದು, ನೀವು ಸ್ಪರ್ಧಿಸಬೇಕು ಎಂದು ಹಲವು ನಾಯಕರು ನನಗೆ ಒತ್ತಾಯಿಸಿದರು’ ಎಂದರು.

‘ದೇಶದ 6- 7 ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲಾಗಿದೆ. ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದೆಲ್ಲವನ್ನೂ ಎದುರಿಸಲು ಕಾಂಗ್ರೆಸ್ ಶಕ್ತಿಶಾಲಿಯಾಗಬೇಕು. ಇದು ಒಬ್ಬರಿಂದ ಆಗುವ ಕೆಲಸ ಅಲ್ಲ. ಎಲ್ಲರೂ ಒಟ್ಟಾಗಿ ಸೇರಿ ಸಂಘಟನೆ ಮಾಡಬೇಕು. ಆ ಮೂಲಕ ನಿರುದ್ಯೋಗ, ಹಣದುಬ್ಬರ, ಜಿಡಿಪಿ ಕುಸಿತ, ರೂಪಾಯಿ ಮೌಲ್ಯ ಕುಸಿತ, ಆರ್ಥಿಕ ಹಿನ್ನಡೆ, ಖಾಸಗೀಕರಣ, ಉದ್ಯೋಗ ನಷ್ಟ ಕಡಿಮೆ ಆಗುತ್ತಿದೆ. ದುರ್ಬಲ ವರ್ಗದವರಿಗೆ ಮೀಸಲಾತಿ ಉದ್ಯೋಗ ಸಿಗುತ್ತಿಲ್ಲ. ನಾನು ವಿದ್ಯಾರ್ಥಿ ಘಟ್ಟದಿಂದ ಈ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಪಕ್ಷಕ್ಕೆ ಬಲ ತುಂಬುತ್ತಾ ಬಂದಿದ್ದೇನೆ’ ಎಂದರು.

‘ಬಿಜೆಪಿ ಹಾಗೂ ಆರೆಸ್ಸೆಸ್‌ ಬೆಂಬಲಿತ ಸರ್ಕಾರ ಸಂವಿಧಾನಕ್ಕೆ ತಿಲಾಂಜಲಿ ಕೊಟ್ಟಿದ್ದು, ಸಂವಿಧಾನ ರೀತಿ ನಡೆದುಕೊಳ್ಳುತ್ತಿಲ್ಲ. ಐಟಿ, ಇಡಿ ಮೂಲಕ ಚುನಾಯಿತ ಸರ್ಕಾರ ಕೆಡವುತ್ತಿದ್ದಾರೆ. ಅವರ ಪಕ್ಷ ಸೇರಲು ಒಪ್ಪದಿದ್ದರೆ ಕೇಸ್ ಮುಂದುವರಿಸುತ್ತಾರೆ’ ಎಂದು ಆರೋಪಿಸಿದ ಖರ್ಗೆ, ‘ಇಲ್ಲಿ ಕಳಂಕಿತರು ಅಲ್ಲಿ ಹೋಗಿ ಕ್ಲೀನ್ ಆಗುತ್ತಾರೆ’ ಎಂದರು.

ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್‌ಗೆ ಯಾವ ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ, ‘ನಾನು ಈ ವಿವಾದಾತ್ಮಕ ವಿಚಾರವಾಗಿ ಮಾತನಾಡುವುದಿಲ್ಲ. ಅವರ ವಿಚಾರದ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ. ಇದು ನಮ್ಮ ಮನೆ ವಿಚಾರ. ಇಲ್ಲಿ ಅವರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಇದೆ. ಇದು ಪಕ್ಷದ ಆಂತರಿಕವಾಗಿ ನಡೆಯುತ್ತಿರುವ ಸ್ನೆಹಯುತ ಸ್ಪರ್ಧೆ' ಎಂದರು.

‘ಖರ್ಗೆ ಅವರು ಗಾಂಧಿ ಕುಟುಂಬದ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ’ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಒಳ್ಳೆಯ ವಿಚಾರಗಳು ಇದ್ದರೆ ಅವರ ಸಲಹೆ ಪಡೆಯುತ್ತೇನೆ. ಉತ್ತಮ ಸಲಹೆ ನೀವು ಕೊಟ್ಟರೂ ಸ್ವೀಕರಿಸುತ್ತೇವೆ. ಅವರು ಈ ಪಕ್ಷಕ್ಕೆ ದುದಿದಿದ್ದು, ಅವರ ಸಲಹೆ ಪಡೆಯುತ್ತೇನೆ. ಅದು ನನ್ನ ಕರ್ತವ್ಯ. 20 ವರ್ಷಗಳ ಅವರ ಅನುಭವ ನಾನು ಕಲಿಯಬೇಕಿದೆ ' ಎಂದರು.

‘20 ವರ್ಷಗಳಿಂದ ಸೋನಿಯಾ ಗಾಂಧಿ ಅವರು ಪಕ್ಷ ಸಂಘಟನೆ ಮಾಡಿ ಹಲವು ಕಾನೂನು ತಂದು ಬಡವರ ಹೊಟ್ಟೆ ತುಂಬುವ ಆಹಾರ ಭದ್ರತೆ, ಶಿಕ್ಷಣ ಹಕ್ಕು, ನರೆಗಾದಂತಹ ಯೋಜನೆ ತಂದಿದ್ದಾರೆ. ಇಂಥ ಯೋಜನೆಗಳಿಗೆ ಬೆಂಬಲ ನೀಡಬೇಕು. ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 6 ರಾಜ್ಯಗಳಲ್ಲಿ ಸರ್ಕಾರ ಮಾಡಿದ್ದೆವು. ಮೋದಿ ಹಾಗೂ ಅಮಿತ್ ಶಾ ಅವರು ಸಾಂವಿಧಾನಿಕ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಒಂದೊಂದಾಗಿ ಸರ್ಕಾರ ಕೆಡವಿದರು. ಆ ಕುಟುಂಬ ಪಕ್ಷಕ್ಕೆ ಸೇವೆ ಸಲ್ಲಿಸಿಕೊಂದು ಬಂದಿದೆ. ಪಂಡಿತ್ ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹತ್ತು ಹಲವು ಯೋಜನೆಗಳು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನಂತರ ಪಕ್ಷ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಧಿಕಾರ ಸ್ವೀಕಾರ ಮಾಡಲಿಲ್ಲ. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಆ ಹುದ್ದೆ ನೀಡಿದರು. 10 ವರ್ಷಗಳಲ್ಲಿ ಹಲವು ಪ್ರಗತಿಪರ ಯೋಜನೆಗಳು ಬಂದವು. ಕೆಲ ಚುನಾವಣೆ ಕಳೆದುಕೊಂಡ ಹಿನ್ನೆಲೆಯಲ್ಲಿ ಇಂತಹ ಮಾತು ಹೇಳುವುದು ಸರಿಯಲ್ಲ‘ ಎಂದರು.

‘ಕಾಂಗ್ರೆಸ್ ನಾಯಕರು ಸಹಕಾರ ನೀಡುತ್ತಿಲ್ಲ’ ಎಂಬ ಶಶಿ ತರೂರ್ ಅವರ ಹೇಳಿಗೆ, ‘ನಾನು ಹಾಗೂ ನನ್ನ ಚುನಾವಣಾ ಪ್ರಚಾರದ ಅಧಿಕಾರಿಗಳು ನನ್ನ ಪರವಾಗಿ ಸಂಘಟನೆ ಮಾಡುತ್ತಿದ್ದಾರೆ. ನಮ್ಮ ಬಳಿ ಬಂದವರನ್ನು ಬೇರೆಯವರ ಜೊತೆ ಕಲಿಸಲು ಆಗುತ್ತದೆ‘ ಎಂದು ಪ್ರಶ್ನಿಸಿದರು.

ನೀವು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವುದರಿಂದ ರಾಜ್ಯದ ಮೇಲೆ ಪ್ರಭಾವ ಬೀರುತ್ತದೆಯೆ ಎಂಬ ಪ್ರಶ್ನೆಗೆ, ‘ನಮ್ಮ ರಾಜ್ಯದಲ್ಲಿ ಸಾಕಷ್ಟು ಮುಖಂಡರು ಇದ್ದಾರೆ. ರಾಜ್ಯದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಡುತ್ತಿದ್ದಾರೆ. ಹೀಗಾಗಿ ನನ್ನಿಂದ ಎಲ್ಲಾ ಪ್ರಯೋಜನ ಆಗಲಿದೆ ಎಂದು ನಾನು ಹೇಳುವುದಿಲ್ಲ. ಏನೇ ಆದರೂ ಅದು ಎಲ್ಲ ನಾಯಕರ ಸಾಮೂಹಿಕ ನೇತೃತ್ವದ ಫಲ. ಇದನ್ನೇ ನಾನು ನಂಬಿದ್ದೇನೆ ' ಎಂದರು.

2019ರ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿ ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದವರಿಗೆ ಏನು ಹೇಳಬಯಸುತ್ತೀರಿ ಎಂದು ಕೇಳಿದಾಗ, ‘ನಾನು ಪಕ್ಷಕ್ಕಾಗಿ ಇದ್ದೇನೆ ಹೊರತು ಬೇರೆ ವಿಚಾರಕ್ಕೆ ಅಲ್ಲ. ನಾನು ಎಂದಿಗೂ ಯಾವುದೇ ಸ್ಥಾನ ಬಯಸಿರಲಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ, ಈ ಅವಕಾಶವನ್ನು ನಿರೀಕ್ಷೆ ಮಾಡಿರಲಿಲ್ಲ. 1994ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬಿದ್ದ ನಂತರ ವಿರೋಧ ಪಕ್ಷದ ನಾಯಕ ಆಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. 2008ರಲ್ಲಿ ಶಾಸಗಾಂಗ ಪಕ್ಷದ ನಾಯಕನಾಗಿದ್ದೆ. ನನ್ನಂಥ ಹಲವರು ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಪಕ್ಷ ಯಾವ ಜವಾಬ್ದಾರಿ ನೀಡುತ್ತದೆಯೋ ಅದರಂತೆ ನಡೆಯುತ್ತೇನೆ. ನನಗೆ ಯಾರೂ ವಿರೋಧಿಗಳಿಲ್ಲ ' ಎಂದರು.

ಪಕ್ಷದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ಜತೆ ಖರ್ಗೆ ಅವರ ಬಣ ಬರುತ್ತದೆಯೇ ಎಂದು ಕೇಳಿದಾಗ, ‘ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಸಮಾನರು. ಒಗ್ಗಟ್ಟಿದ್ದರೆ ನಮ್ಮ ಸರ್ಕಾರ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT