ಬೆಂಗಳೂರು: ಕೋವಿಡ್ ಎರಡನೇ ಅಲೆಯ ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಗುರುವಾರವೂ ಇದೇ ರೀತಿ ವದಂತಿಯೊಂದು ಹರಡಿದ್ದು, ಹುಲಿಕಲ್ ನಟರಾಜ್ ಅವರು ಇನ್ನಿಲ್ಲ. ಭಾವಪೂರ್ಣ ಶ್ರದ್ಧಾಂಜಲಿ’ ಎನ್ನುವ ಅಡಿಬರಹವಿರುವ ಪೋಸ್ಟ್ಗಳು ವೈರಲ್ ಆಗಿದ್ದವು.
ಈ ವದಂತಿಯಿಂದ ಸಾಕಷ್ಟು ಅಭಿಮಾನಿಗಳು, ಕುಟುಂಬಸ್ಥರನ್ನು ಆಘಾತಕ್ಕೊಳಗಾಗಿದ್ದರು. ಸೂಕ್ತ ಮಾಹಿತಿ ಅರಿಯದ ಹಲವರು ಹುಲಿಕಲ್ ನಟರಾಜ್ ಅವರ ಚಿತ್ರವನ್ನು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದರು. ಇದೀಗ ವದಂತಿಗಳ ಕುರಿತು ಹುಲಿಕಲ್ ನಟರಾಜ್ ಅವರೇ ಸ್ಪಷ್ಟನೆ ನೀಡಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೊಟೊ ಹಾಕಿ, ನಾನು ಮೃತಪಟ್ಟಿದ್ದೇನೆ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಕುರಿತು ಹಲವಾರು ಮಂದಿ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿದ್ದೇನೆ. ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಜನರ ಆಶೀರ್ವಾದ ಇರುವವರೆಗೂ ನನಗೆ ಏನೂ ಆಗುವುದಿಲ್ಲ’ ಎಂದು ವಿಡಿಯೊದಲ್ಲಿ ಉಲ್ಲೇಖಿಸಿದ್ದಾರೆ.