ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶ: ಮೊದಲ ದಿನವೇ ₹7.6 ಲಕ್ಷ ಕೋಟಿ ಹೂಡಿಕೆ

ಜಾಗತಿಕ ಹೂಡಿಕೆದಾರರ ಸಮಾವೇಶ l ಮೊದಲ ದಿನವೇ ಗುರಿ ದಾಟಿದ ಬಂಡವಾಳ ಮೊತ್ತ
Last Updated 2 ನವೆಂಬರ್ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ತಂದಿತ್ತ ಆರ್ಥಿಕ ಸಂಕಷ್ಟ–ಹಿಂಜರಿತದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಆಯೋ ಜನೆ ಆಗಿರುವ ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ವು ರಾಜ್ಯ ಸರ್ಕಾರದ ನಿರೀಕ್ಷೆಗೂ ಮೀರಿ ಬಂಡವಾಳ ಆಕರ್ಷಿಸಿದೆ.

‘ಸಮಾವೇಶದ ಮೂಲಕ ಒಟ್ಟು ₹ 5 ಲಕ್ಷ ಕೋಟಿ ಮೊತ್ತದ ಹೂಡಿಕೆ ರಾಜ್ಯಕ್ಕೆ ಹರಿದುಬರಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಮೊದಲ ದಿನದ ಹೂಡಿಕೆ ಒಪ್ಪಂದಗಳ ಯಾದಿ ಅಂತಿಮಗೊಂಡಾಗ ಒಟ್ಟು ಮೊತ್ತ ₹ 7.6 ಲಕ್ಷ ಕೋಟಿಗೆ ಮುಟ್ಟಿತ್ತು.

ಭಾರತದ ಉದ್ಯಮ ಜಗತ್ತಿನ ಪ್ರಮುಖರಾದ ವಿಪ್ರೊ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಭಾರ್ತಿ ಎಂಟರ್‌ಪ್ರೈಸಸ್‌ ಉಪಾಧ್ಯಕ್ಷ ರಾಜನ್ ಭಾರ್ತಿ ಮಿತ್ತಲ್, ಜೆಎಸ್‌ಡಬ್ಲ್ಯು ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್, ಅದಾನಿ ಪೋರ್ಟ್ಸ್‌ ಆ್ಯಂಡ್‌ ಎಸ್‌ಇಜೆಡ್‌ ಸಿಇಒ ಕರಣ್ ಅದಾನಿ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ರೂಪದಲ್ಲಿ ಸಮಾವೇಶಕ್ಕೆ ಚಾಲನೆ ನೀಡಿದರು. ಕರ್ನಾಟಕಕ್ಕೆ ಇರುವ ಅಪೂರ್ವ ಅವಕಾಶ, ಸ್ಪರ್ಧಾತ್ಮಕತೆಯ ಸಾಮರ್ಥ್ಯವನ್ನು ಪ್ರಧಾನಿ ಬಣ್ಣಿಸಿದರು. ಬಂಡವಾಳ ಹರಿವಿನ ಸಮಾವೇಶದ ಚಾಲನೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ, ಸಚಿವ ನಿರಾಣಿ ಜತೆಗೂಡಿದರು.

₹ 5.58 ಲಕ್ಷ ಕೋಟಿ ಹೂಡಿಕೆಗೆ ಸಂಬಂಧಿಸಿದ ವಲಯ ಹಾಗೂ ಕಂಪನಿಗಳ ವಿವರಗಳನ್ನು ಪ್ರಧಾನಿ ಭಾಷಣದ ನಂತರದಲ್ಲಿ, ಉದ್ಘಾಟನಾ ಸಮಾರಂಭದಲ್ಲಿಯೇ ಪ್ರಕಟಿಸಲಾಯಿತು. ಸಂಜೆ ಹೊತ್ತಿಗೆ ಸುದ್ದಿಗೋಷ್ಠಿ ನಡೆಸಿದ ಸಚಿವ ಮುರುಗೇಶ ನಿರಾಣಿ, ಒಪ್ಪಂದದ ಒಟ್ಟು ಮೊತ್ತ ₹7.6 ಲಕ್ಷ ಕೋಟಿಗೆ ಮುಟ್ಟಿದೆ ಎಂದು ವಿವರಿಸಿದರು. ಅವರು ಹೆಚ್ಚುವರಿ ಹೂಡಿಕೆಯ ವಲಯವಾರು ವಿವರ ನೀಡಲಿಲ್ಲ.

ಬುಧವಾರ ಅಂತಿಮಗೊಂಡ ಒಪ್ಪಂದಗಳ ಪ್ರಕಾರ ಹೆಚ್ಚಿನ ಪ್ರಮಾಣದ ಹೂಡಿಕೆಯು ಗ್ರೀನ್‌ ಹೈಡ್ರೋಜನ್ (ಇದನ್ನು ಇಂಧನವಾಗಿ ಬಳಸಲಾಗುತ್ತದೆ) ವಲಯದಲ್ಲಿ ಆಗಲಿದೆ. ಅಲ್ಲದೆ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಕೂಡ ವಿವಿಧ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹಣ ತೊಡಗಿಸಲಿವೆ.

ಮುಂದಿನ ಏಳು ವರ್ಷಗಳಲ್ಲಿ ಒಟ್ಟು ₹ 1 ಲಕ್ಷ ಕೋಟಿ ಹಣವನ್ನು ಅದಾನಿ ಸಮೂಹವು ರಾಜ್ಯದಲ್ಲಿ ಹೂಡಿಕೆ ಮಾಡಲಿದೆ ಎಂದು ಕರಣ್ ಅದಾನಿ ತಿಳಿಸಿದರು.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಮೂಹವು ಹೆಚ್ಚಿನ ಹೂಡಿಕೆ ಮಾಡಲಿದೆ. ರಾಜ್ಯದ ಸಿಮೆಂಟ್ ತಯಾರಿಕಾ ವಲಯದಲ್ಲಿ ಸಮೂಹವು ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಟುವಟಿಕೆ ಹೆಚ್ಚಿಸಲಾಗುವುದು. ಕರಾವಳಿ ಭಾಗದಲ್ಲಿ ಅದಾನಿ ವಿಲ್ಮರ್ ಕಂಪನಿಯು ತನ್ನ ವಹಿವಾಟು ವಿಸ್ತರಿಸಲಿದೆ ಎಂದು ಅವರು ವಿವರ ನೀಡಿದರು.

‌‘ನಾವು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಟ್ಟು ₹ 50 ಸಾವಿರ ಕೋಟಿ ಹೂಡಿಕೆ ಮಾಡಲಿದ್ದೇವೆ. ಈ ಮೊತ್ತದಲ್ಲಿ ಹೆಚ್ಚಿನ ಪಾಲು ಕರ್ನಾಟಕದಲ್ಲಿ ಹೂಡಿಕೆ ಆಗಲಿದೆ’ ಎಂದು ಸ್ಟರ್ಲೈಟ್ ಪವರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಅಗರ್ವಾಲ್ ಹೇಳಿದರು.

ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಟ್ಟು ₹ 1 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡುವ ಆಲೋಚನೆ ಇರುವುದಾಗಿ ಸಜ್ಜನ್ ಜಿಂದಾಲ್ ಹೇಳಿದರು. ಖನಿಜಗಳ ಹರಾಜಿನ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಅವರು ಮನವಿ ಮಾಡಿದರು. ಕಂಪನಿಯು ಉಕ್ಕು ಉತ್ಪಾದನಾ ಘಟಕ, ನವೀಕರಿಸಬಹುದಾದ ಇಂಧನ ಹಾಗೂ ಬಂದರು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಆಲೋಚನೆ ಹೊಂದಿದೆ.

ಕರ್ನಾಟಕ ಈಗ ಜಾಗತಿಕ ಸ್ಪರ್ಧಿ: ಮೋದಿ

ಸುಲಲಿತ ವಹಿವಾಟು, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಕರ್ಷಣೆ ಸೇರಿದಂತೆ ಅನೇಕ ವಿಷಯಗಳಲ್ಲಿ ಅಗ್ರ ಸ್ಥಾನದಲ್ಲಿರುವ ಕರ್ನಾಟಕವು ಭಾರತದ ಬೇರೆ ರಾಜ್ಯಗಳು ಮಾತ್ರವಲ್ಲ, ವಿಶ್ವದ ಅನೇಕ ರಾಷ್ಟ್ರಗಳಿಗೂ ಸ್ಪರ್ಧೆಯೊಡ್ಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ಬೆಂಗಳೂರು ಅರಮನೆ ಆವರಣದಲ್ಲಿ ಬುಧವಾರ ಆರಂಭವಾದ ‘ಇನ್‌ವೆಸ್ಟ್‌ ಕರ್ನಾಟಕ–2022’ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ವರ್ಚ್ಯುಯಲ್‌ ಆಗಿ ಪಾಲ್ಗೊಂಡು ಉದ್ಘಾಟನಾ ಭಾಷಣ ಮಾಡಿದ ಅವರು, ‘ಕೈಗಾರಿಕೆಗಳಿಂದ ಮಾಹಿತಿ ತಂತ್ರಜ್ಞಾನದವರೆಗೆ, ಹಣಕಾಸು ತಂತ್ರಜ್ಞಾನದಿಂದ ಜೈವಿಕ ತಂತ್ರಜ್ಞಾನದವರೆಗೆ, ನವೋದ್ಯಮಗಳಿಂದ ಸುಸ್ಥಿರ ಇಂಧನದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕವು ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭಿಸಿದೆ’ ಎಂದರು.

ದೇಶದ 500 ಫಾರ್ಚ್ಯೂನ್‌ ಕಂಪನಿಗಳಲ್ಲಿ 400 ಕರ್ನಾಟಕದಲ್ಲಿವೆ. ದೇಶದಲ್ಲಿ ಬೃಹತ್‌ ಪ್ರಮಾಣದ ವಹಿವಾಟು ನಡೆಸುವ 100 ನವೋದ್ಯಮಗಳಲ್ಲಿ (ಯೂನಿಕಾರ್ನ್‌) 40 ಕರ್ನಾಟಕದ ಒಳಗಿವೆ. ‘ಡಬ್ಬಲ್‌ ಎಂಜಿನ್‌’ ಸರ್ಕಾರದ ಆಡಳಿತದಲ್ಲಿ ಕರ್ನಾಟಕದಲ್ಲಿ
ಎಲ್ಲವೂ ಅತ್ಯಂತ ವೇಗವಾಗಿ ನಡೆಯುತ್ತಿದೆ. ಹೀಗಾಗಿ ಜಗತ್ತಿನ ಹೂಡಿಕೆದಾರರೆಲ್ಲರೂ ಈ ರಾಜ್ಯದತ್ತ ಆಸಕ್ತಿ ತೋರುತ್ತಿದ್ದಾರೆ ಎಂದು ತಿಳಿಸಿದರು.

ಈ ಹೂಡಿಕೆದಾರರ ಸಮ್ಮೇಳನವು ಸ್ಪರ್ಧಾತ್ಮಕತೆ ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಯ ಮಿಶ್ರಣದ ಅತ್ಯುತ್ತಮ ಮಾದರಿ. ಹಲವು ರಾಷ್ಟ್ರಗಳ ಹೂಡಿಕೆದಾರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ಹಲವು ಸಾವಿರ ಕೋಟಿ ರೂಪಾಯಿ ಹೂಡಿಕೆ ಒಪ್ಪಂದಗಳಿಗೆ ಸಹಿ ಬೀಳಲಿದೆ. ಹೊಸ ಹೊಸ ಕ್ಷೇತ್ರಗಳಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತು ಯೋಚಿಸಬೇಕಾಗಿದೆ ಎಂದರು.

ಆರ್ಥಿಕ ವ್ಯವಸ್ಥೆ ಸುಭದ್ರ: ಕೋವಿಡ್‌ ಮತ್ತು ಯುದ್ಧಗಳ ಕಾರಣದಿಂದ ಜಗತ್ತಿನ ಹಲವು ರಾಷ್ಟ್ರಗಳು ಆರ್ಥಿಕ ಕುಸಿತ ಎದುರಿಸುತ್ತಿವೆ. ಆದರೆ, ಭಾರತದ ಆರ್ಥಿಕತೆಯ ಬುನಾದಿ ಭದ್ರವಾಗಿದೆ. ದೇಶವು ಆರ್ಥಿಕ ಕುಸಿತ ಅಪಾಯದಿಂದ ದೂರವಿದ್ದು, ಹೂಡಿಕೆದಾರರು ಇಲ್ಲಿ ವಹಿವಾಟು ನಡೆಸಲು ಉತ್ಸುಕರಾಗಿದ್ದಾರೆ ಎಂದು ಮೋದಿ ಹೇಳಿದರು.

ಹೂಡಿಕೆದಾರರಿಗೆ ಉತ್ತೇಜನ ನೀಡುವುದಕ್ಕಾಗಿ ತಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅನುಪಯುಕ್ತವಾಗಿದ್ದ 1,500ಮೀರಿದ ಕಾನೂನುಗಳನ್ನು ಮತ್ತು ಸಾವಿರಾರು ನಿಯಮಗಳನ್ನು ರದ್ದುಗೊಳಿಸಲಾಗಿದೆ. ಹೂಡಿಕೆದಾರರಿಗೆ ಕೆಂಪುಪಟ್ಟಿಯ ಕಿರಿಕಿರಿಯ ಕಾಲ ಮುಗಿದಿದೆ. ಕೆಂಪುಹಾಸಿನ ಸ್ವಾಗತ ನೀಡುವ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದರು.

ಬ್ರ್ಯಾಂಡ್‌ ಬೆಂಗಳೂರಿಗೆ ಶ್ಲಾಘನೆ

‘ಪ್ರತಿಭೆ ಮತ್ತು ತಂತ್ರಜ್ಞಾನದ ಕುರಿತು ಚರ್ಚಿಸುವಾಗಲೆಲ್ಲ ‘ಬ್ರ್ಯಾಂಡ್‌ ಬೆಂಗಳೂರು’ ಹೆಸರು ಮುಂಚೂಣಿಗೆ ಬರುತ್ತದೆ. ಬೆಂಗಳೂರಿನ ಹೆಸರು ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನ ಗಮನವನ್ನೇ ಸೆಳೆಯುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ಭಾಷಣ ಆರಂಭಿಸುವಾಗಲೇ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಹೇಳಿದ ಪ್ರಧಾನಿ, ‘ಕರ್ನಾಟಕವು ಪರಂಪರೆ, ತಂತ್ರಜ್ಞಾನ, ಪರಿಸರ, ಸಂಸ್ಕೃತಿ ಎಲ್ಲವೂ ಮೇಳೈಸಿರುವ ಸುಂದರ ನೆಲ’ ಎಂದರು.

‘ಉದ್ಯೋಗ ಸೃಜಿಸಿದವರಿಗೆ ಹೆಚ್ಚು ಉತ್ತೇಜನ’

ಹೂಡಿಕೆ ಸ್ನೇಹಿ ವಾತಾವರಣದ ಜತೆಗೆ ರಾಜ್ಯದ ಜನರ ಹಿತ ಕಾಯುವುದೂ ಮುಖ್ಯ. ಹೆಚ್ಚು ಉದ್ಯೋಗ ಸೃಜಿ ಸುವ ಹೂಡಿಕೆದಾರರಿಗೆ ರಾಜ್ಯ ಸರ್ಕಾರ ಹೆಚ್ಚು ಉತ್ತೇಜನಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

‘ಇನ್‌ವೆಸ್ಟ್‌ ಕರ್ನಾಟಕ–2022’ ಜಾಗತಿಕ ಹೂಡಿಕೆದಾರರ ಸಮ್ಮೇಳ ನದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಪ್ರೋತ್ಸಾಹ ನೀಡುವುದಕ್ಕಾಗಿಯೇ ನೀತಿಯನ್ನು ಜಾರಿಗೊಳಿಸಲಾಗಿದೆ. ಹೂಡಿಕೆದಾರರಿಗೆ ಈಗ ಇರುವ ಉತ್ತೇಜನ, ವಿನಾಯ್ತಿಗಳಲ್ಲಿ ಯಾವು ದನ್ನೂ ಕಡಿತಗೊಳಿಸುವುದಿಲ್ಲ. ಅದರೆ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸರ್ಕಾರದ ಕಡೆಯಿಂದ ಹೆಚ್ಚು ಪ್ರೋತ್ಸಾಹ ದೊರೆಯಲಿದೆ’ ಎಂದರು.

ಸಮ್ಮೇಳನದಲ್ಲಿ ನಡೆಯುವ ಹೂಡಿಕೆ ಒಪ್ಪಂದಗಳ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಮೂರು ತಿಂಗಳೊಳಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಒಪ್ಪಂದಗಳು ಕಾಗದದ ಮೇಲಷ್ಟೆ ಉಳಿಯಬಾರದು. ಹೂಡಿಕೆದಾರರು ಕೂಡ ಗಂಭೀರತೆಯಿಂದ ಯೋಜನೆಗಳ ಅನುಷ್ಠಾನಕ್ಕೆ ಕೆಲಸ ಮಾಡಬೇಕು ಎಂದು ಹೇಳಿದರು.

2023ರ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. 2025ರ ಜನವರಿಯಲ್ಲಿ ಮುಂದಿನ ಜಾಗತಿಕ ಹೂಡಿಕೆದಾರರ ಸಮ್ಮೇಳನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌, ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ. ನಾಗರಾಜ್‌, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಕೈಗಾರಿಕಾ ಆಯುಕ್ತೆ ಗುಂಜನ್‌ ಕೃಷ್ಣ,
ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT