ಬೆಂಗಳೂರು: ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲೂ ಪತ್ರಿಕೆಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಯಾವುದೇ ಮೂಲದ ಸುದ್ದಿಯ ಖಚಿತತೆಗೆ ಜನರು ಇಂದಿಗೂ ಪತ್ರಿಕೆಗಳ ಮೇಲೆ ಅಬಲಂಬಿತರಾಗಿದ್ದಾರೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ವಾರ್ತಾ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳು’ ವಿಷಯ ಕುರಿತು ಅವರು ಮಾತನಾಡಿದರು.
ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರ ಡೀಪ್ಫೇಕ್ ವಿಡಿಯೊ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದು ನಕಲಿ ಎಂದು ಖಚಿತವಾಗುವ ವೇಳೆಗೆ ಲಕ್ಷಾಂತರ ಮಂದಿ ಅಸಲಿ ಎಂದೇ ನಂಬಿದ್ದರು. ರಶ್ಮಿಕಾ ಅವರ ಬದಲಿಗೆ ಧಾರ್ಮಿಕ ನಾಯಕರು, ರಾಜಕೀಯ ನಾಯಕರ ಡೀಪ್ಫೇಕ್ ವಿಡಿಯೊ ಹಾಕಿ ನಕಲಿ ಸಂದೇಶ ಹರಿಬಿಟ್ಟಿದ್ದರೆ ಭಾರಿ ಅನಾಹುತಕ್ಕೆ ದಾರಿಯಾಗಿರುತ್ತಿತ್ತು. ಹಾಗಾಗಿ, ಯಾರೂ ತಂತ್ರಜ್ಞಾನದ ದುರ್ಬಳಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಸುದ್ದಿ ಮತ್ತು ವಿಶ್ಲೇಷಣೆಗಳ ನಡುವೆ ವ್ಯತ್ಯಾಸವನ್ನೇ ಅಳಿಸುವ ಬೆಳೆವಣಿಗೆಗಳೂ ನಡೆಯುತ್ತಿವೆ. ಪತ್ರಿಕೋದ್ಯಮದಲ್ಲಿ ಊಹಾ ಪತ್ರಿಕೋದ್ಯಮ ಶುರುವಾಗಿದ್ದು, ಊಹೆಗೆ ಮಿತಿಯೇ ಇಲ್ಲವಾಗಿದೆ. ಸತ್ಯವನ್ನು ತಮಗೆ ಬೇಕಾದಂತೆ ಈ ಹೊಸ ಪ್ರಕಾರ ಚಿತ್ರಿಸುತ್ತಿದೆ ಎಂದರು.
ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಪತ್ರಕರ್ತ ನಾಗೇಶ್ ಹೆಗಡೆ, ತಂತ್ರಜ್ಞಾನ ವಿಶ್ಲೇಷಕ ಶ್ರೀನಿಧಿ, ಕಾವ್ಯಶ್ರೀ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪ ಉಪಸ್ಥಿತರಿದ್ದರು.