ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

313 ವಾರ್ಡನ್‌ ಹುದ್ದೆಗೆ ಬಡ್ತಿ ರದ್ದು: ಕರ್ನಾಟಕ ಆಡಳಿತ ನ್ಯಾಯಮಂಡಳಿ

‘ಹಿಂದುಳಿದ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮ– 2019’ರ ಉಲ್ಲಂಘನೆ– ಕೆಎಟಿ ಆದೇಶ
Published 11 ಫೆಬ್ರುವರಿ 2024, 15:20 IST
Last Updated 11 ಫೆಬ್ರುವರಿ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 313 ನಿಲಯ ಮೇಲ್ವಿಚಾರಕರಿಗೆ (ಹಾಸ್ಟೆಲ್‌ ಸೂಪರಿಂಟೆಂಡೆಂಟ್), ನಿಲಯ ಪಾಲಕ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳಿಗೆ ನೀಡಿದ್ದ ಬಡ್ತಿಯನ್ನು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಫೆ. 5ರಂದು ಆದೇಶ ಹೊರಡಿಸಿದೆ.

ಈ ಮುಂಬಡ್ತಿಯಿಂದ ಬಾಧಿತರಾದ ನೌಕರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ, ನಿಯಮಬಾಹಿರವಾಗಿ ಬಡ್ತಿ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಬಡ್ತಿಯನ್ನು ರದ್ದುಪಡಿಸುವಂತೆ ಕೋರಿ ಕೆಎಟಿ ಮೆಟ್ಟಿಲೇರಿದ ಎಲ್ಲ ಅರ್ಜಿದಾರರಿಗೆ ಇಲಾಖೆಯು ಒಂದು ತಿಂಗಳ ಒಳಗೆ ತಲಾ ₹5 ಸಾವಿರದಂತೆ ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇವಾ (ವೃಂದ ಮತ್ತು ನೇಮಕಾತಿ) ನಿಯಮಗಳು–2019’ರ ಪ್ರಕಾರ ವಾರ್ಡನ್ ಹುದ್ದೆಗೆ ನೇಮಕಾತಿಗೆ ನಿರ್ಬಂಧವಿದೆ. ಹೀಗಾಗಿ, ವಾರ್ಡನ್‌ ಹುದ್ದೆಗೆ (ವೇತನ ಶ್ರೇಣಿ ₹ 37,900– ₹ 70,850) ಬಡ್ತಿ ಪಡೆದವರು, ನಿಲಯ ಮೇಲ್ವಿಚಾರಕ ವೃಂದದ ಹುದ್ದೆಗೆ ತಕ್ಷಣ ಮರಳಬೇಕು. ಬಡ್ತಿ ಪಡೆದು ಈ ವೇತನ ಶ್ರೇಣಿ ಪಡೆಯಲು ಅರ್ಹರಲ್ಲದ ಕಾರಣ, ಹೆಚ್ಚುವರಿಯಾಗಿ ಪಡೆದ ವೇತನ ಮೊತ್ತವನ್ನು ತಿಂಗಳ ಕಂತಿನಲ್ಲಿ ವಸೂಲು ಮಾಡಬೇಕು ಎಂದೂ ಆದೇಶದಲ್ಲಿದೆ ವಿವರಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು–2019 ಅನ್ನು ರೂಪಿಸಿ 2019 ರ ಅ. 30ರಂದು ಅಧಿಸೂಚನೆ ಹೊರಡಿಸಲಾಗಿದೆ. ಪ್ರಸ್ತುತ ಈ ನಿಯಮ ಜಾರಿಯಲ್ಲಿದೆ. ಆಗ ವಾರ್ಡನ್‌ ಹುದ್ದೆಯಲ್ಲಿದ್ದವರನ್ನು ಹೊರತುಪಡಿಸಿ, ವಾರ್ಡನ್‌ ಹುದ್ದೆಗಳನ್ನೇ ರದ್ದು ಮಾಡಲಾಗಿತ್ತು. ಹೊಸ ಹುದ್ದೆಗಳ ಸೃಜನೆಗೂ ಅವಕಾಶ ಇಲ್ಲ. ಅಲ್ಲದೆ, ನಿಲಯ ಮೇಲ್ವಿಚಾರಕರಿಗೆ ಕಚೇರಿ ಮೇಲ್ವಿಚಾರಕರು ಅಥವಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಹುದ್ದೆಗೆ ಮಾತ್ರ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿತ್ತು.

2019ರಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದು, ವಾರ್ಡನ್‌ ಹುದ್ದೆಗಳು ರದ್ದಾಗುವ ಮೊದಲೇ ತಮಗೆ ಬಡ್ತಿಯ ಅರ್ಹತೆ ಇತ್ತು ಎಂದು ಕೆಲವು ನೌಕರರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಒಂದು ಬಾರಿಗೆ ಬಡ್ತಿಗೆ ಅವಕಾಶ ನೀಡಲು ಅನುಮತಿ ಕೋರಿ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇಲಾಖೆಯು 2023ರ ಜುಲೈ 21ರಂದು 313 ವಾರ್ಡನ್‌ ಹುದ್ದೆಗಳಿಗೆ ಬಡ್ತಿಗೆ ಅನುಮತಿ ನೀಡಿತ್ತು.

ವಾರ್ಡನ್‌ ಹುದ್ದೆಗೆ ಬಡ್ತಿ ನೀಡುವಂತೆ ನಿಲಯ ಮೇಲ್ವಿಚಾರಕರು ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ‘ನಿಲಯ ಪಾಲಕರ ಹುದ್ದೆಗಳನ್ನು ರದ್ದುಗೊಳಿಸಿರುವುದರಿಂದ ಬಡ್ತಿ ನೀಡಲು ಅವಕಾಶ ಇಲ್ಲ’ ಎಂದು ಇಲಾಖೆ ಆಯುಕ್ತ ಕೆ.ಎ. ದಯಾನಂದ ಅವರು 2022ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ನಿಲಯ ಮೇಲ್ವಿಚಾರಕರಿಗೆ ಹಿಂಬರಹ ನೀಡಿದ್ದರು. ನಾಲ್ಕು ವರ್ಷಗಳ ಹಿಂದೆಯೇ ರದ್ದುಗೊಂಡಿದ್ದ ವಾರ್ಡನ್‌ ಹುದ್ದೆಗಳನ್ನು ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯದೆ ಮರು ಸೃಜಿಸಿ ತರಾತುರಿಯಲ್ಲಿ ನಿಲಯ ಮೇಲ್ವಿಚಾರಕರಿಗೆ ಬಡ್ತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯ ಆಗಸ್ಟ್‌ 22ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT