ಬಳ್ಳಾರಿ: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಕಪ್ಪು ಪಟ್ಟಿ ಧರಿಸಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಕಚೇರಿಗೆ ಮುತ್ತಿಗೆ ಹಾಕಿದರು.
ನಗರದ ಮೋತಿ ಸರ್ಕಲ್ನಲ್ಲಿ ಮೊದಲಿಗೆ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ನಂತರ ಮೆರವಣಿಗೆ ಮೂಲಕ ಬುಡಾ ಕಟ್ಟಡದಲ್ಲಿರುವ ನಾಸಿರ್ ಹುಸೇನ್ ಕಚೇರಿಯತ್ತ ತೆರಳಿದರು.
ಈ ವೇಳೆ ಪೊಲೀಸರು ಅವರನ್ನು ತಡೆಯುವ ಪ್ರಯತ್ನ ನಡೆಸಿದರು. ಆಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಮಧ್ಯೆ ಕೆಲವರು ಕಚೇರಿ ನಾಮ ಫಲಕಕ್ಕೆ ಮಸಿ ಬಳಿಯಲು ಯತ್ನಿಸಿದರಾದರೂ ಪೊಲೀಸರು ಅವರ ಪ್ರಯತ್ನ ವಿಫಲಗೊಳಿಸಿದರು.
ಕಚೇರಿಯ ನಾಮಫಲಕ ಕಿತ್ತು ಹಾಕಲು ಪ್ರತ್ನಿಸಿದರಾದರೂ ಪೊಲೀಸರು ಅದನ್ನೂ ತಡೆದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಭದ್ರತೆಗಾಗಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ.