ಬೆಂಗಳೂರು: ‘ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತು ರಾಜ್ಯಗಳಲ್ಲಿ ಅಧಿಕಾರಕ್ಕೇರಲು ಬಿಜೆಪಿ ಎಂತಹ ಕೀಳುಮಟ್ಟಕ್ಕೆ ಇಳಿಯುತ್ತಿದೆ ಎಂಬುದು ‘ಪೆಗಾಸಸ್’ ಗೂಢಚರ್ಯೆ ಪ್ರಕರಣದಿಂದ ಬಹಿರಂಗವಾಗಿದೆ. ಬಿಜೆಪಿಯ ನಡೆ ಅತ್ಯಂತ ಅಪಾಯಕಾರಿಯಾದುದು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಗೃಹ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ ಅವರ ಮೇಲೆ ‘ಪೆಗಾಸಸ್’ ಮೂಲಕ ನಿಗಾ ಇರಿಸಲಾಗಿತ್ತು ಎಂಬ ಮಾಹಿತಿ ಕುರಿತು ಮಂಗಳವಾರ ಅವರು ಪ್ರತಿಕ್ರಿಯಿಸಿದರು.
‘ನನ್ನ ಮೇಲೆಯೇ ಗೂಢಚರ್ಯೆ ನಡೆಸಿದ್ದ ಬಿಜೆಪಿ, ನನ್ನ ವಿರುದ್ಧವೇ ದೂರವಾಣಿ ಕದ್ದಾಲಿಕೆ ಆರೋಪ ಮಾಡಿತ್ತು. ನನ್ನ ವಿರುದ್ಧ ಸಿಬಿಐ ತನಿಖೆ ಯನ್ನೂ ನಡೆಸುವ ಮೂಲಕ ಆತ್ಮ ವಂಚನೆಯಿಂದ ನಡೆದುಕೊಂಡಿದೆ’ ಎಂದು ಹೇಳಿದರು.
ರಾಜಕಾರಣಿ ಗಳು, ಅಧಿಕಾರಿ ಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಕಣ್ಗಾವಲು ಇರಿಸಿದ್ದ ಬಿಜೆಪಿ ಮುಂದೊಂದು ದಿನ ಜನರ ವೈಯಕ್ತಿಕ ಬದುಕಿನಲ್ಲೂ ಇಣುಕುವುದಿಲ್ಲ ಎಂಬುದಕ್ಕೆ ಖಚಿತತೆ ಇದೆಯೆ? ಬಿಜೆಪಿಯ ಇಂತಹ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದರು.
ಹೊಸದೇನೂ ಅಲ್ಲ: ‘ಈ ರೀತಿ ಪ್ರಮುಖರ ಮೇಲೆ ಕಣ್ಗಾವಲು ಇಡುವ ಕ್ರಮ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕವೇ ಬಂದದ್ದಲ್ಲ. 15 ವರ್ಷಕ್ಕೂ ಹೆಚ್ಚು ಕಾಲದಿಂದ ಈ ರೀತಿಯ ಕಣ್ಗಾವಲು ಇದೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳೂ ಕಣ್ಗಾವಲು ಇರಿಸುತ್ತಿವೆ’ ಎಂದರು.
ತಮ್ಮ ಕಾರ್ಯದರ್ಶಿಯ ಎರಡು ಮೊಬೈಲ್ ಫೋನ್ಗಳ ಮೇಲೆ ನಿಗಾ ಇರಿಸಲಾಗಿತ್ತು ಎಂಬುದರ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇಶ ಮತ್ತು ರಾಜ್ಯದ ಹಿತಕ್ಕೆ ವಿರುದ್ಧವಾಗಿ ತಾವು ಏನನ್ನೂ ಮಾಡಿಲ್ಲ ಎಂದು ಹೇಳಿದರು.