ಬೆಂಗಳೂರು: ಬರದ ಬೇಗೆಯಿಂದ ಬೆಂದಿದ್ದ ನಾಡಿನ ಹಲವು ಜಿಲ್ಲೆಗಳಲ್ಲಿ ಭಾನುವಾರ ಬಿರುಸಿನ ಮಳೆಯಾಗಿ ಸಂಭ್ರಮ ಮೂಡಿಸಿದೆ. ಹುಬ್ಬಳ್ಳಿ, ಧಾರವಾಡ, ಚಿಕ್ಕಮಗಳೂರು, ಬೆಳಗಾವಿ, ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆ ಬಿದ್ದಿದೆ.
ಮುಂಗಾರು ಹಂಗಾಮಿನ ಕೃಷಿಗೆ ಭೂಮಿ ಹದಗೊಳಿಸುವುದಕ್ಕೆ ಈ ಮಳೆ ಸಹಕಾರಿಯಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹಲವು ಕೆರೆಗಳಿಗೆ ನೀರು ಹರಿಯುವುದನ್ನು ಕಂಡು ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಮಧ್ಯಾಹ್ನ 2 ಗಂಟೆಗೂ ಹೆಚ್ಚು ಅವಧಿಗೆ, ಕೊಳ್ಳೇಗಾಲದಲ್ಲಿ 45 ನಿಮಿಷಗಳಿಗೂ ಹೆಚ್ಚು ಹೊತ್ತು ಮಳೆ ಸುರಿದಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಧಾರಾಕಾರ ಮಳೆಯಾಗಿದೆ. ಚನ್ನಗಿರಿ ಬಳಿಯ ಜೋಳದಹಾಳ್ ಗ್ರಾಮದ ಕೆರೆ ಕೋಡಿ ಬಿದ್ದಿದೆ.
ವಿಜಯಪುರ, ಹೊಸಪೇಟೆ, ಬಳ್ಳಾರಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ರಭಸದ ಮಳೆಯಾಗಿದ್ದು ಬಿರು ಬಿಸಿಲಿನ ವಾತಾವರಣ ತಗ್ಗಿದೆ. ಚಿತ್ರದುರ್ಗ ಜಿಲ್ಲೆಯ ಕೆಲ್ಲೋಡು ಬಳಿ ವೇದಾವತಿ ಬ್ಯಾರೇಜ್ ತುಂಬಿ ಹರಿದಿದೆ. ಹಲವೆಡೆ ಜಲಪಾತಗಳು ಮೈದುಂಬಿ ಹರಿದಿವೆ.