ಮೈಸೂರು: ರಾಜ್ಯದಲ್ಲಿ ‘ಅನ್ನ ಸುವಿಧಾ’ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, 90 ವರ್ಷ ಮೇಲ್ಪಟ್ಟವರ ಮನೆಗೆ ಪಡಿತರವನ್ನು ತಲುಪಿಸಲಾಗುತ್ತಿದೆ ಎಂದು ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ 90 ಸಾವಿರ ಹಿರಿಯರಿಗೆ ಹೀಗೆ ಮನೆಗೆ ಪಡಿತರ ವಿತರಣೆ ವ್ಯವಸ್ಥೆ ಪ್ರಗತಿಯಲ್ಲಿದೆ. ಇದರಿಂದಾಗಿ ಅವರು ಪಡಿತರ ಅಂಗಡಿಗಳಿಗೆ ಅಲೆಯುವುದು ತಪ್ಪಲಿದೆ. ದೇಶದಲ್ಲಿಯೇ ಇದೊಂದು ವಿನೂತನ ಯೋಜನೆ ಆಗಿದೆ’ ಎಂದು ಅವರು ವಿವರಿಸಿದರು. ‘ಅಂಗವಿಕಲರಿಗೂ ಇದೇ ಮಾದರಿಯಲ್ಲಿ ಮನೆಗೆ ಪಡಿತರ ವಿತರಣೆ ಬಗ್ಗೆ ಚಿಂತಿಸಲಾಗುವುದು’ ಎಂದರು.