ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತುಪರಿಸ್ಥಿತಿ ಪಿಂಚಣಿಗೆ ಆರ್‌ಎಸ್‌ಎಸ್‌ ವಿರೋಧ

ಮಾಸಾಶನ ಜಾರಿಗೆ ಸರ್ಕಾರದ ಸಿದ್ಧತೆ
Last Updated 7 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ತುರ್ತುಪರಿಸ್ಥಿತಿಯಲ್ಲಿ ಜೈಲು ಶಿಕ್ಷೆ ಅನುಭವಿಸಿದ ಹೋರಾಟಗಾರರಿಗೆ ಮಾಸಿಕ ಪಿಂಚಣಿ ನೀಡಲು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ಇದು ಚರ್ಚೆಗೆ ಕಾರಣವಾಗಿದೆ.

ಉದ್ದೇಶಿತ ಈ ಯೋಜನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವಲಯದಲ್ಲೇ ಈಗಾಗಲೇ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಈ ಯೋಜನೆಯನ್ನು ವಿರೋಧಿಸಿದೆ. ಆದರೆ, ಬೆರಳೆಣಿಕೆಯ ಸ್ವಯಂ ಸೇವಕರು ಪಿಂಚಣಿ ಯೋಜನೆ ಜಾರಿಗೆ ತೆರೆಮರೆಯಲ್ಲೇ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತುರ್ತುಪರಿಸ್ಥಿತಿ ಹೇರಿಕೆಯಾದ 40ನೇ ವರ್ಷದ ನೆನಪಿನಲ್ಲಿ (2015) ದೆಹಲಿಯಲ್ಲಿ ಬಿಜೆಪಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೋರಾಟಗಾರರಿಗೆ ಮಾಸಾಶನ ನೀಡುವ ವಿಷಯ ಅಲ್ಲಿ ಮುನ್ನೆಲೆಗೆ ಬಂದಿತ್ತು. ಆ ಬಳಿಕ ಬಿಜೆಪಿ ಅಧಿಕಾರವಿದ್ದ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬಂತು.

ರಾಜ್ಯದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿತ್ತು. 2015 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣ ಪಿಂಚಣಿ ಯೋಜನೆ ಜಾರಿಗೆ ಬರಲಿಲ್ಲ. ಇದೀಗ ಬಿಜೆಪಿ ಅಧಿಕಾರ ಹಿಡಿದಿರುವುದರಿಂದ ಸಂಘದ ಕೆಲವರು ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.

ಆರ್‌ಎಸ್‌ಎಸ್‌ ನಿಲುವೇನು?: ‘ತುರ್ತು ಪರಿಸ್ಥಿತಿ ವಿರುದ್ಧ ಸ್ವಯಂ ಸೇವಕರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಅದು ದೇಶಕ್ಕಾಗಿ ಮಾಡಿದ ಕೆಲಸ. ಇದಕ್ಕಾಗಿ ಪಿಂಚಣಿ ಪಡೆಯುವುದು ಸರಿಯಲ್ಲ ಎಂಬುದು ಸಂಘದ ನಿಲುವು’ ಎಂದು ಆರ್‌ಎಸ್‌ಎಸ್‌ನ ಕ್ಷೇತ್ರೀಯ ಸಂಘ ಚಾಲಕ (ದಕ್ಷಿಣ ಮಧ್ಯ ಕ್ಷೇತ್ರ) ವಿ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದಾಗ, ಅದಕ್ಕೆ ಅವರು ಸಮ್ಮತಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪಿಂಚಣಿ ಜಾರಿಗೆ ಯತ್ನಿಸಿದವರು, ಹೋರಾಟದಲ್ಲಿ ಭಾಗವಹಿಸಿದವರಿಗೆ ತಾವು ಬಂಧಿಯಾಗಿದ್ದ ಜೈಲುಗಳಿಂದ ಪ್ರಮಾಣ ಪತ್ರ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು ಪಿಂಚಣಿ

ಉತ್ತರ ಪ್ರದೇಶದಲ್ಲಿ ತಿಂಗಳಿಗೆ ₹25 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಎರಡು ಹಂತಗಳಲ್ಲಿ ಇದು ಜಾರಿಯಾಗಿದೆ. 1 ತಿಂಗಳು ಜೈಲುವಾಸ ಅನುಭವಿಸಿದವರಿಗೆ ₹5 ಸಾವಿರ ಮತ್ತು 1 ತಿಂಗಳಿಗಿಂತ ಹೆಚ್ಚು ಅವಧಿ ಜೈಲುವಾಸ ಅನುಭವಿಸಿದವರಿಗೆ ₹10 ಸಾವಿರ ನಿಗದಿ ಮಾಡಲಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್‌, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ತುರ್ತುಪರಿಸ್ಥಿತಿ ಹೋರಾಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT