ಹುಬ್ಬಳ್ಳಿ: ಅಧಿಕಾರದ ಆಸೆಗಾಗಿ ಬಿಜೆಪಿ ಸೇರಿರುವ ರಮೇಶ ಜಾರಕಿಹೊಳಿ ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿದ್ದಾರೆ. ಈಗ ಆ ಪಕ್ಷದ ವರಿಷ್ಠರು ಅಧಿಕಾರ ಕೊಡುವ ತನಕ ಕಾಯಲೇಬೇಕು. ಇದನ್ನು ಬಿಟ್ಟು ನನ್ನ ಜೊತೆ 17 ಜನ ಶಾಸಕರು ಇದ್ದಾರೆ ಎಂದರೆ ಯಾರೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಜನ ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ ಹೊರತು ರಮೇಶ ಮುಖ ನೋಡಿ ಅಲ್ಲ ಎಂದರು.
ರಮೇಶ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಕೈ ಕೊಟ್ಟು ಹೋದ ಎಲ್ಲರಿಗೂ ಪಶ್ಚಾತ್ತಾಪ ಆಗಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಪಕ್ಷ ಹೇಳಿದ್ದನ್ನು ಕೇಳಲೇಬೇಕು. ಆದರೆ, ಕೈ ಕೊಟ್ಟು ಹೋದವರು ಅಂದುಕೊಂಡಂತೆ ಎಲ್ಲವೂ ಆಗುವುದಿಲ್ಲ ಎಂದರು.
ಬಿಜೆಪಿಯಲ್ಲಿಯೂ ಸರ್ಕಸ್ ನಡೆದಿದೆ. ಅವರಲ್ಲಿಯೂ ಸಾಕಷ್ಟು ಸಮಸ್ಯೆಗಳು ಇವೆ. ಅವುಗಳನ್ನು ಯಡಿಯೂರಪ್ಪ ನಿಭಾಯಿಸಬೇಕಿದೆ ಎಂದರು.