ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾಲ್ಕು ದಶಕಗಳಿಂದ ಕಾಂಗ್ರೆಸ್ ನಲ್ಲಿ ನಿಷ್ಠೆಯಿಂದ ದುಡಿಯುತ್ತಿರುವ ಬಿ.ಕೆ.ಹರಿಪ್ರಸಾದ ಅವರಿಗೆ ಸಚಿವ ಸ್ಥಾನ ತಪ್ಪಿಸಿರುವುದು ದುರಂತ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಅಹಿಂದ ವರ್ಗದಲ್ಲಿ ಕೇವಲ ಕುರುಬರು, ಒಕ್ಕಲಿಗರು ಇಲ್ಲ. ಈಡಿಗ ಸೇರಿದಂತೆ ಹಲವು ಸಮುದಾಯಗಳಿವೆ. ಅವರಿಗೂ ನಿರೀಕ್ಷಿತ ಪ್ರಾತಿನಿಧ್ಯ ಸಿಗಬೇಕಿದೆ. ಹೀಗಾಗಿ ಈಡಿಗ ಸಮುದಾಯ ಸೇರಿದಂತೆ ಉಳಿದ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು' ಎಂದರು.
'ಈಡಿಗ, ನಾಮಧಾರಿ, ಬಿಲ್ಲವ ಸಮುದಾಯದವರಲ್ಲಿ ರಾಜಕೀಯ, ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 3 ಮತ್ತು 4 ರಂದು ಕುಮಟಾದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಸಮುದಾಯದ ಪ್ರಮುಖರನ್ನು ಸೇರಿಸಿ ವಿಶೇಷ ಚಿಂತನ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಚರ್ಚಿಸಲಾಗುವುದು' ಎಂದರು.
'ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಪೀಠಕ್ಕೆ ₹500 ಕೋಟಿ ಅನುದಾನ ಒದಗಿಸಬೇಕು. ಪೀಠಕ್ಕೆ ಅಧ್ಯಕ್ಷ, ಸದಸ್ಯರ ನೇಮಕವಾಗಬೇಕು. ಉತ್ತರ ಕನ್ನಡದಲ್ಲಿ ಯು.ಪಿ.ಎಸ್.ಸಿ ತರಬೇತಿ ಕೇಂದ್ರ ತೆರೆಯಬೇಕು' ಎಂಬ ಬೇಡಿಕರಯನ್ನೂ ಮುಂದಿಟ್ಟರು.