ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿ–ಶಿಕ್ಷಕ ಸ್ನೇಹಿ ಪಠ್ಯ ಸಿದ್ಧ

Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ದೀರ್ಘ ವಿವರ ಒಳಗೊಂಡ ಪಾಠಗಳಿಗೆ ಕತ್ತರಿ ಹಾಕಿದ್ದು, ವಿದ್ಯಾರ್ಥಿ–ಶಿಕ್ಷಕಸ್ನೇಹಿ ಪಠ್ಯಪುಸ್ತಕಗಳ ಕರಡನ್ನು ಮಂಜುನಾಥ ಜಿ. ಹೆಗಡೆ ಸಂಯೋಜಕರಾಗಿರುವ ರಾಜ್ಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ಸಿದ್ಧಪಡಿಸಿದೆ. ಅಂತಿಮ ವರದಿಯನ್ನು ಸದ್ಯವೇ ಸರ್ಕಾರಕ್ಕೆ ಸಲ್ಲಿಸಲಿದೆ. 

ಆರನೇ ತರಗತಿಯಿಂದ 10ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಐದು ಸಮಿತಿಗಳನ್ನು ರಚಿಸಲಾಗಿತ್ತು. ಕನ್ನಡ ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆ, 6, 7ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 8, 9, 10ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಅವಧಿಯ ಒಳಗೆ ಮಧ್ಯಂತರ ವರದಿ ನೀಡಿದ ನಂತರ ಮತ್ತೆ ಎರಡು ತಿಂಗಳು ಅವಧಿ ವಿಸ್ತರಿಸಲಾಗಿತ್ತು. 

ಹಿಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದ್ದ ಪಾಠಗಳು ಹಾಗೂ ಕೆಲ ಅಂಶಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆದು, ಬರಗೂರು ರಾಮಚಂದ್ರಪ್ಪ ಸಮಿತಿ ರೂಪಿಸಿದ್ದ ಹಳೆಯ ಪಠ್ಯಗಳನ್ನೇ ಮುಂದುವರಿಸಿತ್ತು. 2023–24ನೇ ಸಾಲಿನ ಪಠ್ಯಪುಸ್ತಕಗಳು ಮುದ್ರಣವಾಗಿ ಆಗಲೇ ಶಾಲೆಗಳನ್ನು ತಲುಪಿದ್ದರಿಂದ ಕೈಬಿಟ್ಟ–ಸೇರಿಸಿದ ಪಾಠಗಳು, ತಿದ್ದುಪಡಿ ಮಾಡಿದ ಅಂಶಗಳನ್ನು ಒಳಗೊಂಡ ಪ್ರತ್ಯೇಕ ಕೈಪಿಡಿ ಸಿದ್ಧಪಡಿಸಿ, ಶಾಲೆಗಳಿಗೆ ಸರಬರಾಜು ಮಾಡಲಾಗಿತ್ತು. ಕರ್ನಾಟಕ ಪಠ್ಯಪುಸ್ತಕ ಸಂಘ ಮಾಡಿದ್ದ ತಿದ್ದುಪಡಿ
ಗಳನ್ನು ಹಾಗೆ ಉಳಿಸಿಕೊಂಡಿರುವ ಸಮಿತಿ, ಹೊಸದಾಗಿ ಎಂಟು ಪಾಠಗಳನ್ನು ಸೇರ್ಪಡೆ ಮಾಡಿದೆ. 

ಮಕ್ಕಳ ಸುಲಭ ಹಾಗೂ ಪರಿಣಾಮಕಾರಿ ಕಲಿಕೆಗೆ ಸಹಾಯವಾಗುವಂತೆ ದೀರ್ಘ ಪಾಠಗಳಿಗೆ ಕತ್ತರಿ ಹಾಕಿದ್ದು, ಒಂದು ವಿಷಯದ ಒಟ್ಟು ಬೋಧನಾ ಅವಧಿಗೆ ಪೂರಕವಾಗಿ ಪಾಠಗಳನ್ನು ಮಿತಿಗೊಳಿಸಿದೆ. ಆ ಮೂಲಕ ಪ್ರತಿ ವಿಷಯದ ಸರಾಸರಿ ಬೋಧನಾ ಅವಧಿಯನ್ನು 15 ಗಂಟೆಗಳಷ್ಟು ಇಳಿಕೆ ಮಾಡಿದೆ. ಇಳಿಕೆಯಾದ ಅವಧಿಯನ್ನು ಮಕ್ಕಳ ಜತೆ ಸಮಾಲೋಚನೆ, ಸಂವಾದ, ಪುನರ್‌ಮನನ ತರಗತಿಗಳಿಗೆ ಬಳಸಿಕೊಳ್ಳಲು ಶಿಫಾರಸು ಮಾಡಿದೆ.‌ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಇರುವ ಪಠ್ಯ ವಿಷಯಗಳ ಪುನರಾವರ್ತನೆಗೂ ತಡೆ ಹಾಕಿದೆ. ಪ್ರತಿ ವಿಷಯದಲ್ಲೂ ಮಕ್ಕಳ ಗ್ರಹಿಕಾ ಸಾಮರ್ಥ್ಯ ಹೆಚ್ಚಿಸಲು ಪರೀಕ್ಷೆಗಳಿಗೆ ಹೊರತಾದ ಪೂರಕ ಗದ್ಯ, ಪದ್ಯಗಳನ್ನು ಅಳವಡಿಸಿದೆ. 

ಕನ್ನಡ ಭಾಷಾ ವಿಷಯದಲ್ಲಿ ಪ್ರಸಿದ್ಧ ಕವಿಗಳ ಅರ್ಥಪೂರ್ಣ ಪದ್ಯಗಳ ಜತೆಗೆ, ವ್ಯಾಕರಣಗಳು ಒಂದೇ ಕಡೆ ಇರುವಂತೆ, ತರಗತಿಯಿಂದ ತರಗತಿಗೆ ಮುಂದುವರಿಕೆಯಾಗುವಂತೆ ಅಳವಡಿಸಲಾಗಿದೆ. ಸಮಾಜ ವಿಜ್ಞಾನದಲ್ಲಿನ ವರ್ಗೀಕರಣದ ಬಹುಹಂತಗಳನ್ನು ಕಡಿತ ಮಾಡಲಾಗಿದೆ. 

ಸಮಿತಿ ಆಯ್ಕೆ ಮಾಡಿರುವ ಪಾಠ ಪರಿಷ್ಕರಿಸಿದ ಗದ್ಯಗಳನ್ನು ಅನುಭವಿ ಕ್ರಿಯಾಶೀಲ ಶಿಕ್ಷಕರಿರುವ ಶಾಲೆಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಅಭಿಪ್ರಾಯ ಸಂಗ್ರಹಣೆಯ ನಂತರ ಅಂತಿಮ ಕರಡು ಸಿದ್ಧಪಡಿಸಲಾಗಿದೆ.
–ಮಂಜುನಾಥ ಜಿ. ಹೆಗಡೆ ಸಂಯೋಜಕ ರಾಜ್ಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ 

ಪಠ್ಯಪುಸ್ತಕ ವಿಳಂಬವಾಗದು ಶಾಲಾ ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸುವುದಕ್ಕಾಗಿ ಪ್ರತಿ ಪಠ್ಯಪುಸ್ತಕವನ್ನೂ ಎರಡು ಭಾಗಗಳಾಗಿ ವಿಂಗಡಿಸಿ ಮುದ್ರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿತ್ತು. ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿ ತನ್ನ ಮಧ್ಯಂತರ ವರದಿಯ ಜತೆಗೇ  ಮೊದಲ ಕರಡು ಪ್ರತಿ ನೀಡಿತ್ತು. ಇದರಿಂದ ಸೆಮಿಸ್ಟರ್‌–1 ಪಠ್ಯಗಳು ಈಗಾಗಲೇ ಸಿದ್ಧವಾಗಿವೆ. ಅಂತಿಮ ಕರಡು ಪ್ರತಿ ನೀಡಿದ ನಂತರ ಸೆಮಿಸ್ಟರ್‌–2 ಪಠ್ಯಗಳು ಸಿದ್ಧವಾಗಲಿವೆ. ಹಾಗಾಗಿ 2024–25ನೇ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಲಿವೆ ಎನ್ನುತ್ತಾರೆ ಮಂಜುನಾಥ ಹೆಗಡೆ. 

2024–25ನೇ ಸಾಲಿಗಿಲ್ಲ ರಾಜ್ಯ ಶಿಕ್ಷಣ ನೀತಿ?
ರಾಜ್ಯ ಶಿಕ್ಷಣ ನೀತಿಯ ಕರಡು ರೂಪಿಸಲು ಶಿಕ್ಷಣ ತಜ್ಞ ಹಾಗೂ ಯುಜಿಸಿ ಮಾಜಿಅಧ್ಯಕ್ಷ ಪ್ರೊ.ಸುಖ್‌ದೇವ್ ಥೋರಟ್ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ ಆಯೋಗದ ಅವಧಿಯನ್ನು ಇದೇ ವರ್ಷದ ಆಗಸ್ಟ್‌ವರೆಗೆ ವಿಸ್ತರಿಸಲಾಗಿದೆ.ಹಾಗಾಗಿ, ಹೊಸ ಶಿಕ್ಷಣ ನೀತಿಯ ಅನುಷ್ಠಾನ ಇನ್ನೊಂದು ವರ್ಷ ವಿಳಂಬವಾಗಲಿದೆ.  ಆಯೋಗ ಈಗಾಗಲೇ ಪ್ರಥಮ ವರದಿ ಸಲ್ಲಿಸಿದ್ದು, ಇನ್ನಷ್ಟು ವಿಷಯಗಳ ಕುರಿತು ಅಧ್ಯಯನ ನಡೆಸುತ್ತಿದೆ. ಪ್ರೌಢಶಾಲಾ ಹಂತದವರೆಗಿನ ಪಠ್ಯಪುಸ್ತಕ ಗಳು ಮುದ್ರಣ ಹಂತದಲ್ಲಿವೆ. ಪದವಿ ಕಾಲೇಜುಗಳು ಜುಲೈ–ಆಗಸ್ಟ್‌ ವೇಳೆಗೆ ಪ್ರಾರಂಭವಾಗಿರುತ್ತವೆ.  ಆಯೋಗ ಅಂತಿಮ ವರದಿ ನೀಡಿದ ನಂತರ ಅನುಷ್ಠಾನಕ್ಕೆ ಸಮಯಬೇಕಾಗುತ್ತದೆ. ಹಾಗಾಗಿ, ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ವಿಳಂಬವಾಗಲಿದೆ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT