ಬೆಂಗಳೂರು: ‘ನಗರದ ತಿರುವಳ್ಳುವರ್ ಮತ್ತು ಚೆನ್ನೈನ ಸರ್ವಜ್ಞನ ಪ್ರತಿಮೆಗಳು ಕನ್ನಡಿಗರು ಮತ್ತು ತಮಿಳರ ನಡುವಿನ ಸಹೋದರತ್ವದ ಸಂಕೇತ. ಬಿ.ಎಸ್.ಯಡಿಯೂರಪ್ಪ ಅವರಿಂದ ಇವುಗಳ ಅನಾವರಣ ಸಾಧ್ಯವಾಯಿತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಹಲಸೂರು ಬಳಿ ಇರುವ ವಿಶ್ವಕವಿ ತಿರುವಳ್ಳುವರ್ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
‘ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಮತ್ತು ಚೆನ್ನೈನಲ್ಲಿ ಸರ್ವಜ್ಞ ಅವರ ಪ್ರತಿಮೆ ಅನಾವರಣಗೊಳ್ಳಬೇಕು ಎಂಬ ಬಗ್ಗೆ ಹಲವು ದಶಕಗಳ ಕಾಲ ಹೋರಾಟ ನಡೆಯಿತು. 18 ವರ್ಷ ಪ್ರತಿಮೆಯನ್ನು ಮುಚ್ಚಿಡಲಾಗಿತ್ತು. 2009 ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸೋದರ ಭಾವನೆಯ ವೃದ್ಧಿಗಾಗಿ ಕರುಣಾನಿಧಿ ಅವರ ಜತೆ ಮಾತುಕತೆ ನಡೆಸಿದರು. ಅದರ ಪರಿಣಾಮ ಎರಡೂ ಕಡೆ ಪ್ರತಿಮೆಗಳು ಅನಾವರಣಗೊಂಡವು’ ಎಂದರು.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಬಿಜೆಪಿಯ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಅವರು ಭಾಗವಹಿಸಿದ್ದರು.