ಕಲಬುರ್ಗಿ: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಆಗಸ್ಟ್ 1 ರಂದು ವಿವಿಧ ಗ್ರೂಪ್ ‘ಎ’ ತಾಂತ್ರಿಕ, ಗ್ರೂಪ್ ‘ಬಿ’ ತಾಂತ್ರಿಕ ಹಾಗೂ ತಾಂತ್ರಿ ಕೇತರ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ. ಅದೇ ದಿನ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಯು ಜ್ಯೂನಿಯರ್ ಎಂಜಿನಿಯರ್ ಹುದ್ದೆ ಗಳಿಗೂ ಪರೀಕ್ಷೆ ನಡೆಸುತ್ತಿದೆ.
ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ರಾಜ್ಯದ ಸಾವಿರಾರು ಎಂಜಿನಿ ಯರಿಂಗ್ ಅಭ್ಯರ್ಥಿಗಳು ಇದೀಗ ಗೊಂದಲದಲ್ಲಿದ್ದು, ಯಾವುದಾದರೂ ಒಂದು ಪರೀಕ್ಷೆಯನ್ನಷ್ಟೇ ಬರೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕೆಪಿಎಸ್ಸಿಯು ಜುಲೈ 30ರಿಂದ ಆಗಸ್ಟ್ 1ರವರೆಗೆ ವಿವಿಧ ಇಲಾಖೆಗಳ ಹಲವು ಹುದ್ದೆಗಳಿಗೆ ಪರೀಕ್ಷೆ ಗಳನ್ನು ನಡೆಸುತ್ತಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ.
‘ಕೇಂದ್ರೀಯ ಜಲ ಅಭಿವೃದ್ಧಿ ಏಜೆನ್ಸಿ ನಡೆಸುವ ಪರೀಕ್ಷೆಯನ್ನು ರಾಜ್ಯದ ಕಲಬುರ್ಗಿ ಭಾಗದ ವಿದ್ಯಾರ್ಥಿಗಳು ಪಕ್ಕದ ತೆಲಂಗಾಣದ ಹೈದರಾಬಾದ್ ನಲ್ಲಿ ಪರೀಕ್ಷೆ ಬರೆಯಬೇಕಿದೆ. ಹೀಗಾಗಿ, ಕೆಪಿಎಸ್ಸಿ ಪರೀಕ್ಷೆಯನ್ನು ಬೇರೆ ದಿನ ನಿಗದಿಮಾಡಬೇಕು’ ಎಂದು ಎರಡೂ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ‘ಪ್ರಜಾವಾಣಿ’ಗೆ ಕೋರಿದರು.
‘ಒಂದೇ ದಿನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರೀಕ್ಷೆ ನಡೆಸಿದರೆ ಹೇಗೆ? ಕೆಪಿಎಸ್ಸಿ ಈ ಕುರಿತು ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಎರಡೂ ಪರೀಕ್ಷೆಗೆ ಅರ್ಜಿ ಹಾಕಿರುವ ವಿನಯ್ ಎಸ್.ಟಿ. ಕೋರಿದರು.